ಕಾಸರಗೋಡು: ವರ್ಕಾಡಿ ಸೆಕ್ರೆಡ್ ಹಾರ್ಟ್ಆಫ್ ಜೀಸಸ್ ಚರ್ಚ್ನ ನೂತನ ದೇವಾಲಯ ಲೋಕಾರ್ಪಣೆ
Fri, Aug 20 2021 05:39:21 PM
ಕಾಸರಗೋಡು, ಆ 20 (DaijiworldNews/PY): ವರ್ಕಾಡಿ ಸೆಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್ನ ನೂತನ ದೇವಾಲಯದ ಆಶೀರ್ವಚನ ಹಾಗೂ ಲೋಕಾರ್ಪಣೆ ಮತ್ತು ಗುರುಸದನ ಹಾಗೂ ಬೇಜ್ ಮೆಂಟ್ನ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಶುಕ್ರವಾರ ನೆರವೇರಿಸಿದರು.
ಬಿಷಪ್ ಅವರನ್ನು ಚರ್ಚ್ನ ಧರ್ಮಗುರು ಫಾದರ್ ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಪಾಲನಾ ಮಂಡಳಿ ಪದಾಧಿಕಾರಿಗಳು ಬರಮಾಡಿಕೊಂಡರು. ಬಳಿಕ ನೂತನ ದೇವಾಲಯದ ಆಶೀರ್ವಚನ ಹಾಗೂ ಬಲಿಪೂಜೆ ನೆರವೇರಿತು. ಬಲಿಪೂಜೆಯನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೆರವೇರಿಸಿದರು.
ಕಾಸರಗೋಡು ವಲಯ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್ ಸ್ಟ್ಯಾನಿ ಪಿರೇರಾ, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮ್ಯಾಕ್ಸಿಮ್ ನೊರೊನ್ಹಾ, ಫಾದರ್ ಫ್ರಾನ್ಸಿಸ್ ರೊಡ್ರಿಗಸ್ ಅವರು ಬಲಿಪೂಜೆಗೆ ನೇತೃತ್ವ ನೀಡಿದರು.
ಫಾದರ್ ವಿಜಯ್ ಮಚಾದೋ ಬಲಿಪೂಜೆಯ ಕಾರ್ಯನಿರ್ವಹಣೆಯನ್ನು ಮಾಡಿದರು.
ಬಳಿಕ ಧರ್ಮಗುರುಗಳ ನಿವಾಸವನ್ನು ಬಿಷಪ್ ಅವರು ಉದ್ಘಾಟಿಸಿ ಆಶೀರ್ವಚನ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಷಪ್ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ವಲಯ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್ ಸ್ಟ್ಯಾನಿ ಪಿರೇರಾ, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮ್ಯಾಕ್ಸಿಮ್ ನೊರೊನ್ಹಾ, ಸಿಸ್ಟರ್ ಸಿಂತಿಯಾ ಸಿಕ್ವೇರಾ, ಪಾಲನಾ ಸಮಿತಿ ಉಪಾಧ್ಯಕ್ಷ ರೋನಿ ಡಿಸೋಜ, ಕಾರ್ಯದರ್ಶಿ ಜಯಪ್ರಕಾಶ್ ಡಿಸೋಜ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚರ್ಚ್ನ ಸಮಗ್ರ ಇತಿಹಾಸವನ್ನು ಒಳಗೊಂಡ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಲಾಯಿತು.ಇಂಜಿನಿಯರ್ ದೇವ್ ರಾಜ್ ರಾವ್ ಅವರನ್ನು ಬಿಷಪ್ ಅವರು ಸನ್ಮಾನಿಸಿದರು. ಫಾದರ್ ಫ್ರಾನ್ಸಿಸ್ ರೊಡ್ರಿಗಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೋನಿ ಡಿ ಸೋಜ ವಂದಿಸಿದರು. ಸಿಸ್ಟರ್ ಸೆವ್ರಿನ್ ಡಿ ಕುನ್ಹಾ ಹಾಗೂ ಲವೀನಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.
ಕೊರೊನಾ ಮಾನದಂಡ ಪಾಲಿಸಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.