ಕುಂದಾಪುರ, ಆ 20 (DaijiworldNews/MS): ಕುಂದಾಪುರದ ಭಂಡಾರ್ಕರ್ ಕಾಲೇಜಿನ ಪದವಿ ವಿದ್ಯಾರ್ಥಿಗಳಿಬ್ಬರು ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ತ್ರಾಸಿ ಸಮೀಪದ ಕೊಡಪಾಡಿಯಲ್ಲಿ ಬೈಕ್ ಗಳೆರಡರ ಮಧ್ಯೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡು , ಬಳಿಕ ತುರ್ತು ಚಿಕಿತ್ಸೆ ಪಡೆದು ಅಂಬ್ಯುಲೆನ್ಸ್ ನಲ್ಲಿಯೇ ಬಂದು ಪರೀಕ್ಷೆ ಬರೆದ ಪ್ರಸಂಗ ಗುರುವಾರ ನಡೆದಿದೆ.
ವಿದ್ಯಾರ್ಥಿಗಳಾದ ಮಸಾಯಿದ್ ಮತ್ತು ವಾಜಿದ್ ಅಪಘಾತದಲ್ಲಿ ಗಾಯಗೊಂಡ ಬಳಿಕ ಅಂಬ್ಯುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ಆನಂತರ ಅದೇ ಅಂಬ್ಯುಲೆನ್ಸ್ ನ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ.
ಅಂಬ್ಯುಲೆನ್ಸ್ ನಿರ್ವಾಹಕ ಸಹಕರಿಸಿದರು. ಅಪಘಾತದಲ್ಲಿ ಗಾಯಗೊಂಡರೂ ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿಗಳ ದೃಢಸಂಕಲ್ಪ ಮತ್ತು ಧೈರ್ಯವನ್ನು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.