ಮಂಗಳೂರು, ಆ. 19 (DaijiworldNews/SM): ಅಫ್ಘಾನಿಸ್ತಾನದಲ್ಲಿ ಕರಾವಳಿಯ ಮೂಲದ ಸಿಸ್ಟರ್ ವೊಬ್ಬರು ಸಿಲುಕಿಕೊಂಡಿದ್ದಾರೆ. ಸಿಸ್ಟರ್ ಥೆರೆಸಾ ಕ್ರಾಸ್ತಾ ಕಾಬೂಲಿನಲ್ಲಿ ಸಿಕ್ಕಿಕೊಂಡವರಾಗಿದ್ದಾರೆ. ಅಫ್ಘಾನ್ ನಲ್ಲಿ ಬುದ್ಧಿಮಾಂದ್ಯ ಮಕ್ಕಳ ಆರೈಕೆ ಮಾಡಲು ವರ್ಷಗಳ ಹಿಂದೆ ಸಿಸ್ಟರ್ ತೆರಳಿದ್ದರು. ಆದರೆ, ಇದೀಗ ಅಫ್ಘಾನಿಸ್ತಾನವನ್ನು ತಾಲಿಬಾನರು ಕೈ ವಶ ಮಾಡಿಕೊಂಡಿರುವ ಹಿನ್ನೆಲೆ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಸದ್ಯ ಚೆನ್ನಾಗಿದ್ದೇನೆ. ಏರ್ ಪೋರ್ಟ್ ನಲ್ಲಿ ಕೆಲವೊಂದು ಗೊಂದಲ ಹಾಗೂ ಆಂತರಿಕ ಕಾರಣಗಳಿಂದಾಗಿ ಯಾರನ್ನು ಕೂಡ ನಿಲ್ದಾಣದೊಳಕ್ಕೆ ಬಿಡುತ್ತಿಲ್ಲ. ಸಾವಿರಾರು ಜನರು ವಿಮಾನ ನಿಲ್ದಾಣದೊಳಗೆ ಸಿಲುಕಿಕೊಂಡಿದ್ದಾರೆ. ಯುಎಸ್ಎ, ಯುಕೆ, ಫ್ರಾನ್ಸ್, ಇಟಲಿಯವರು ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದವರು ಇದ್ದಾರೆ. ಅವರು ಕೂಡ ತಮ್ಮ ತಾಯ್ನಾಡಿಗೆ ಮರಳಲು ಕಾತರದಲ್ಲಿದ್ದಾರೆ. ಆದರೆ, ವಿಮಾನಗಳಿಲ್ಲದೆ ಪರದಾಡುವಂತಾಗಿದೆ. ಎಲ್ಲರೂ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಯಾವುದೇ ಭದ್ರತೆಯಾಗಲಿ, ಜವಾಬ್ದಾರಿಯನ್ನು ತೆಗೆದುಕೊಳ್ಳುವವರಾಗಲಿ ಯಾರೂ ಇಲ್ಲ. ನಾನು ನನ್ನ ಜೊತೆಗಿರುವ ಸಿಸ್ಟರ್ ಹಾಗೂ ಅನಾಥ ಮಕ್ಕಳು ಇಟಲಿಗೆ ತೆರಳಬೇಕಿತ್ತು. ಆದರೆ, ನಮಗೆ ನಿಲ್ದಾಣದೊಳಗಡೆ ಪ್ರವೇಶಕ್ಕೆ ತಾಲಿಬಾನಿಗಳು ಅವಕಾಶ ನೀಡುತ್ತಿಲ್ಲ. ನಾವು ಕಾಯುತ್ತಿದ್ದೇವೆ. ಸದ್ಯ ಪರಿಸ್ಥಿತಿ ಚೇತರಿಕೆಯಲ್ಲಿದೆ' ಎಂಬುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಸಿಸ್ಟರ್ ಥೆರೆಸಾ ಕ್ರಾಸ್ತಾ, ಮೂರು ವರ್ಷಗಳ ಹಿಂದೆ ಇಟಲಿ ಮೂಲದ ಎನ್ ಜಿಓ ಸಂಸ್ಥೆಯೊಂದರ ಮೂಲಕ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿಗೆ ತೆರಳಿದ್ದರು. ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ನಿವಾಸಿಯಾಗಿರುವ ಥೆರೆಸಾ ಈ ಹಿಂದೆ ನೆಲ್ಯಾಡಿಯ ಕಾನ್ವೆಂಟ್ ಒಂದರಲ್ಲಿ ಸಿಸ್ಟರ್ ಆಗಿದ್ದರು. ಬಳಿಕ ಜಪ್ಪಿನಮೊಗರಿನ ಪ್ರಶಾಂತ ನಿವಾಸ ಆಶ್ರಮದಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.