ಉಡುಪಿ, ಆ. 19 (DaijiworldNews/SM): ಕಾಂಗ್ರೆಸ್ ಗೆ ಕೇವಲ ವಿರೋಧಿಸುವುದು ಒಂದೇ ಗೊತ್ತು. ಯಾವುದೇ ಒಳ್ಳೆಯ ಕಾರ್ಯಗಳನ್ನು ಕೂಡ ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಕಾಂಗ್ರೆಸ್ ರಾಷ್ಟ್ರ ವಿರೋಧಿ ಪಾರ್ಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಹೊರತು ಪಡಿಸಿ ಕಾಂಗ್ರೆಸ್ ನಲ್ಲಿ ಪ್ರಧಾನಿಯಾದವರೆಲ್ಲರೂ ಭ್ರಷ್ಟಾಚಾರಿಗಳು. ಆದರೆ, ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿಯವರ ಕಳೆದ ೭ ವರ್ಷದ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ. ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿಸುವುದು ಬಿಜೆಪಿಯ ಗುರಿಯಾಗಿದೆ ಎಂದು ನಳಿನ್ ಹೇಳಿದ್ದಾರೆ.
ಅತೀ ಹೆಚ್ಚು ಮಹಿಳೆಯರು ನರೇಂದ್ರ ಮೋದಿ ಸರಕಾರದಲ್ಲಿದ್ದಾರೆ. ಅತೀ ಹೆಚ್ಚು ಯುವಕರಿರುವುದು ನರೇಂದ್ರ ಮೋದಿ ಸರಕಾರದಲ್ಲಿದ್ದಾರೆ. ಆ ಮೂಲಕ ಬಿ.ಆರ್. ಅಂಬೇಡ್ಕರ್ ಕಂಡಿರುವ ಕನಸನ್ನು ನರೇಂದ್ರ ಮೋದಿ ಸರಕಾರ ಈಡೇರಿಸಿದೆ ಎಂದರು.
ಇನ್ನು ಪ್ರಣಾಳಿಕೆಯಲ್ಲಿ ಹೇಳಿದ ವಿಚಾರಗಳನ್ನು ಬಿಜೆಪಿ ಈಡೇರಿಸಿದೆ. ಕಾಶ್ಮೀರ ನಮ್ಮದೆಂದು ಹೇಳುತ್ತಿದ್ದೆವು. ಇಂದು ಕಾಶ್ಮೀರದ ಹಳ್ಳಿ ಹಳ್ಳಿಗಳಲ್ಲಿ ಭಾರತೀಯ ಧ್ವಜವನ್ನು ಹಾರಿಸಿ ೭೫ನೇ ಸ್ವಾತಂತ್ರ್ಯ ಆಚರಿಸಲಾಗಿದೆ ಎಂದು ಅವರು ಹೇಳಿದ್ದಾರೆ.