ಉಳ್ಳಾಲ, ಆ.19 (DaijiworldNews/HR): ಅಫ್ಘಾನಿಸ್ಥಾನವು ತಾಲಿಬಾನ್ ವಶವಾಗುತ್ತಿದ್ದಂತೆ ಅಘ್ಘಾನ್ನಲ್ಲಿ ಸಿಲುಕಿಕೊಂಡ ಭಾರತೀಯರಲ್ಲಿ ಮಂಗಳೂರು ಮೂಲದ ಅನೇಕ ಮಂದಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಇವರನ್ನು ಕಂಪೆನಿಗಳು ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದ್ದು, ಅದರಲ್ಲಿ ಉಳ್ಳಾಲ ನಿವಾಸಿ ಮೆಲ್ವಿನ್ ಒಬ್ಬರಾಗಿದ್ದಾರೆ.
ಕಾಬೂಲ್ನಿಂದ ಭಾರತೀಯ ವಾಯುಸೇನೆ ಏರ್ಲಿಫ್ಟ್ ಮಾಡಿದವರಲ್ಲಿ ಮೆಲ್ವಿನ್ ಒಬ್ಬರಾಗಿದ್ದು, ಬುಧವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಅವರು ಕಾಬೂಲ್ನ ನ್ಯಾಟೋ ಪಡೆಯ ಮಿಲಿಟರಿ ಬೇಸ್ ಕ್ಯಾಂಪ್ನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್ ಮೈಂಟೆನೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಅವರ ಸಹೋದರ ಮಾತ್ರ ಅಫ್ಘಾನ್ನಲ್ಲೇ ಉಳಿದುಕೊಂಡಿದ್ದು ಭಾರತಕ್ಕೆ ಮರಳಲು ವಿಮಾನದ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮೆಲ್ವಿನ್, "ಭಾರತೀಯ ರಾಯಬಾರಿ ಕಚೇರಿಯಲ್ಲಿದ್ದ ಸಿಬಂದಿಗಳನ್ನು, ಸೆಕ್ಯುರಿಟಿ ತಂಡವನ್ನು ಕರೆತರಲು ಬಂದಿದ್ದ ವಾಯಸೇನೆಯ ಸಿ 17 ವಿಮಾನದಲ್ಲಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 7 ಜನರ ಸಹಿತ ಒಟ್ಟು 160 ಮಂದಿಯನ್ನು ಮಂಗಳವಾರ ಬೆಳಗ್ಗೆ 5 ಗಂಟೆಗೆ ಕಾಬೂಲ್ನಿಂದ ಗುಜರಾತ್ನ ಜಾಮ್ನಗರದಲ್ಲಿರುವ ವಾಯುಸೇನೆ ನೆಲೆಗೆ ಕರೆತಂದಿದ್ದು ಅಲ್ಲಿಂದ ದಿಲ್ಲಿ ಬಳಿಕ ಬೆಂಗಳೂರು ಮಾರ್ಗವಾಗಿ ಇಂದು ಉಳ್ಳಾಲದ ಸ್ವಗೃಹಕ್ಕೆ ಆಗಮಿಸಿದೆ" ಎಂದು ತಿಳಿಸಿದ್ದಾರೆ.
ಇನ್ನು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಜನರನ್ನು ಸಂಸ್ಥೆ ನಾರ್ವೆ, ಲಂಡನ್, ಕತಾರ್ಗೆ ಸ್ಥಳಾಂತರ ಮಾಡಿದ್ದು ಅಲ್ಲಿ ಕೆಲವರನ್ನು ಕ್ವಾರಂಟೈನ್ನಲ್ಲಿ ಇಟ್ಟಿದ್ದು ಬಳಿಕ ಭಾರತಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದರು.
ಮೆಲ್ವಿನ್ ಸಹೋದರಾಗಿರುವ ಡೆಮ್ಸಿ ಎಸಿ ಮೆಕ್ಯಾನಿಕ್ ಆಗಿದ್ದು ಕಾಬೂಲ್ನ ಮಿಲಿಟರಿ ಬೇಸ್ ಕ್ಯಾಂಪ್ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ದಿನಗಳಿಂದ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದು ಅವರು ಸುರಕ್ಷಿತರಾಗಿರುವ ಮಾಹಿತಿ ನೀಡಿದ್ದಾರೆ ಎಂದು ಮೆಲ್ವಿನ್ ತಿಳಿಸಿದ್ದಾರೆ.