ಸುಬ್ರಹ್ಮಣ್ಯ ,ಆ 19 (DaijiworldNews/MS): ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತದ ಆದೇಶದಂತೆ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಶ್ರೀಮಂತ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಸೇವೆಗಳೂ ಆಗಸ್ಟ್ 30 ವರೆಗೆ ನಡೆಯುವುದಿಲ್ಲ.
ಹೀಗಾಗಿ ಶ್ರೀ ದೇವರ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು ಆದಿತ್ಯವಾರ ವಾರಾಂತ್ಯದ ದಿನಗಳಲ್ಲಿ ದೇವರ ದರ್ಶನಕ್ಕೆ ಕೂಡಾ ಅವಕಾಶ ನಿರ್ಬಂಧಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಇದಲ್ಲದೇ ಜಿಲ್ಲಾಧಿಕಾರಿ ಆದೇಶದಂತೆ ಭಕ್ತರ ಆರೋಗ್ಯ ಹಿತದೃಷ್ಠಿಯಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಚವಲ, ಪಂಚಾಮೃತ ಮಹಾಭಿಷೇಕ, ಪ್ರಾರ್ಥನೆ ಸೇರಿದಂತೆ ಯಾವುದೇ ಸೇವೆಗಳು ನಡೆಯುವುದಿಲ್ಲ. ಬೆಳಗ್ಗೆ 7 ರಿಂದ ಮಧ್ಯಾಹ್ನ 11.30 ತನಕ, ಮಧ್ಯಾಹ್ನ 12.15 ರಿಂದ 1.30 ಹಾಗೂ 2.20 ರಿಂದ ರಿಂದ ಸಂಜೆ 7 ರ ತನಕ ಭಕ್ತರು ಸುಬ್ರಮಣ್ಯ ದೇವರ ದರ್ಶನ ಮಾಡಬಹುದಾಗಿದೆ.
ಅಲ್ಲದೆ ಈ ಸಂದರ್ಭ ಮಂಗಳಾರತಿ ಸೇವೆ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾರಾಂತ್ಯ ದಿನಗಳನ್ನು ಹೊರತು ಪಡಿಸಿ ಇತರ ದಿನಗಳಲ್ಲಿ ವಸತಿ ಗೃಹದಲ್ಲಿ ತಂಗಲು ಅವಕಾಶವಿದೆ. ತಂಗುವ ಭಕ್ತರು 72 ಗಂಟೆಯೊಳಗಿನ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎನ್ನುವ ನಿಯಮವನ್ನು ಹೊರಡಿಸಲಾಗಿದೆ.