ಕಾರ್ಕಳ, ಆ 18 (DaijiworldNews/PY): "ಪುರಸಭಾ ಆಡಳಿತ ವ್ಯವಸ್ಥೆಯಲ್ಲಿ ತೊಡಕುಗಳು ಎದುರಾಗಿದೆ. ಶೇ. 50ರಷ್ಟು ಸಿಬ್ಬಂದಿಗಳ ಕೊರತೆ ಎದ್ದುಕಾಡುತ್ತಿದೆ. ಇದರಿಂದ ಸುಸೂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ನಾಗರಿಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸ ಕಾರ್ಯಕ್ಕಾಗಿ ಬರುವಂತಹ ಅರ್ಜಿದಾರರು ವಿನಾ ಕಾರಣ ಕಚೇರಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆಯಾಗಿ ಕಾರ್ಕಳ ಪುರಸಭೆಗೆ ಗ್ರಹಣ ಹಿಡಿದ ಛಾಯೆ ಎದುರಾಗಿದೆ. ರಾಜ್ಯ ಸರಕಾರ ಇದನ್ನು ಗಮನದಲ್ಲಿ ಇಟ್ಟುಕೊಂಡು ಅರ್ಹ ಸಿಬ್ಬಂದಿಗಳನ್ನು ನಿಯೋಜಿಸಬೇಕು" ಎಂದು ಪುರಸಭಾ ಹಿರಿಯ ಸದಸ್ಯ ಅಶ್ಪಕ್ ಮಹಮ್ಮದ್ ಆಗ್ರಹಿಸಿದ್ದಾರೆ.
ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಅಧ್ಯಕ್ಷೆತಯಲ್ಲಿ ಜರುಗಿದ್ದ ಪುರಸಭಾ ಸಾಮಾನ್ಯ ಸಭೆಯಲ್ಲಿ ಮೇಲಿನ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿ, ಕಾರ್ಕಳ ಪುರಸಭೆಯ ಚುಕ್ಕಾಣಿ ಹಿಡಿಯಲೆಂದೇ ಅಂದು ಶಾಸಕರು, ಸಂಸದೆ ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬಿಜೆಪಿ ಆಡಳಿತವನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಅವರ ಗ್ರಹಗತಿಯಂತೆ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾದರೆ, ಶಾಸಕರು ರಾಜ್ಯ ಸರಕಾರದಲ್ಲಿ ಪ್ರಮುಖ ಸಚಿವರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷಾತೀತ ನೆಲೆಯಲ್ಲಿ ಅವರಿಬ್ಬರಿಗೆ ಅಭಿನಂದಿಸುತ್ತೇನೆ. ಬಹುಮತ ಸಾಬೀತು ಪಡಿಸಲು ಹಾಜರಾಗಿದ್ದ ಅವರಿಬ್ಬರು ನಂತರದ ದಿನಗಳಲ್ಲಿ ಪುರಸಭೆಯ ಸಾಮಾನ್ಯ ಸಭೆಯ ಕಲಾಪದಲ್ಲಿ ಒಂದು ಬಾರಿಯೂ ಭಾಗವಹಿಸಲಿಲ್ಲ ಎಂದು ಆರೋಪಿಸಿದರು.
ಒಳಚರಂಡಿಯಲ್ಲಿ ಭಾರೀ ಅವ್ಯವಹಾರ
ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪುರಸಭಾ ವ್ಯಾಪ್ತಿಯಲ್ಲಿ ನಡೆಸಿದ 13 ಕೋ.ರೂ. ವೆಚ್ಚದ ಒಳಚರಂಡಿ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ನಡೆಸಲಾಗಿರುವ ಅಲ್ಪ ಸ್ವಲ್ಪ ಪ್ರಮಾಣದ ಕಾಮಗಾರಿಯೂ ಕಳಪೆಯಾಗಿದೆ. ಸಾರ್ವಜನಿಕರ ಮುಂದೆ ಲೆಕ್ಕ ಪತ್ರ ಒಪ್ಪಿಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದರು. ಅಧಿಕಾರಿಗಳು ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸಬೇಕು. ಸೂಕ್ತ ತನಿಖೆಯಾಗಬೇಕು. ಹಣ ದುರುಪಯೋಗ ಪಡಿಸಿದವರ ವಿರುದ್ಧ ಪುರಸಭೆ ಕಾನೂನು ಕ್ರಮ ಜರಗಿಸಬೇಕು. ಇಲ್ಲವಾದಲ್ಲಿ ಪುರಸಭೆ ಅಧಿಕಾರಿಗಳೇ ಅದಕ್ಕೆ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿ ತರಾಟೆಗೆತ್ತಿಕೊಂಡರು.
ಕಾಮಗಾರಿಯಲ್ಲಿ ಇಂಜಿನಿಯರ್ ಆಗಿದ್ದವರೆ ಗುತ್ತಿಗೆದಾರ ಆಗಿದ್ದಾರೆ ಎಂದು ಶುಭದ ರಾವ್ ನೇರ ಆರೋಪಗೈದರು.
ಸ್ಮಶಾನಕ್ಕೆ ಸಂಚಾಲಕರೇ ಇಲ್ಲ!
ಪುರಸಭಾ ವ್ಯಾಪ್ತಿಯಲ್ಲಿ ಇರುವ ಸ್ಮಶಾನಗಳಿಗೆ ಸಂಚಾಲಕರ ಎಂಬ ಸ್ಥಾನಮಾನ ಎಂಬುವುದಿಲ್ಲ ಎಂದು ಪುರಸಭಾ ಮುಖ್ಯಾಧಿಖಾರಿ ರೂಪಾ ಶೆಟ್ಟಿ ಸಭೆಯ ಮುಂದಿಟ್ಟರು. ಪುರಸಭಾ ಸದಸ್ಯ ಶುಭದರಾವ್ ಅವರು ಕರಿಯಕಲ್ಲು ಸಾರ್ವಜನಕ ಸ್ಮಶಾನ ವಿಚಾರವನ್ನು ಮುಂದಿಟ್ಟು ಮಾತನಾಡಿ, ಖಾಸಗಿಯಾಗಿ ಸಮಿತಿ ರಚಿಸಿಕೊಂಡು ನಡೆಸುವುದಿದ್ದರೆ ಅದಕ್ಕೆ ಪರ್ಯಾಯವಾಗಿ ನಾವು ಕೂಡ ಸಮಿತಿಯನ್ನು ರಚಿಸಬೇಕಾದಿತ್ತು. ಇದೇ ವಿಚಾರವನ್ನು ಕಳೆದ ಮಾಸಿಕ ಸಭೆಯಲ್ಲಿ ಪ್ರಸ್ತಾಪಿಸಿದರೂ ಪುರಸಭಾ ಅಧಿಕಾರಿಗಳು ದಿವ್ಯ ಮೌನವಹಸಿದಿದ್ದಾರೆ. ಮುಂದೆ ಉಂಡಾಗುವ ಗೊಂದಲಗಳಿಗೆ ಪುರಸಭಾ ಅಧಿಕಾರಿಯೇ ನೇರ ಹೊಣೆಗಾರರಾಗಬೇಕಾದಿತ್ತೆಂದರು. ರಾಮಸಮುದ್ರ ಸ್ಮಶಾನಕ್ಕೆ ಸಂಸ್ಕಾರಕ್ಕೆ ಬರುವ ಶವಗಳನ್ನು ತಡೆಯುವ ಕೆಲಸವೂ ಸ್ಥಾಪಿತ ಹಿತಾಸಕ್ತಿಗಳಿಂದ ನಡೆಯುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯ ವಿನ್ನಿ ಬೋಲ್ಡ್ ಮೆಂಡೊನ್ಸ ಸಭೆಯ ಗಮನಕ್ಕೆ ತಂದರು.
ಎಪಿಎಂಸಿ ವತಿಯಿಂದ ಸಂತೆ ಮಾರುಕಟ್ಟೆ ತೆರೆಯುವ ಕುರಿತು ಎಪಿಎಂಸಿ ಅಧಿಕಾರಿ ಮಾಹಿತಿ ನೀಡಿ ಪುರಸಭೆ ಸಹಕಾರ ಕೋರಿದರು. ಸಂತೆ ಮಾರುಕಟ್ಟೆ ಸುಂಕ ವಸೂಲಿಯನ್ನು ಸಮಾನ ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದ ಅಶ್ಪಕ್ ಅಹಮ್ಮದ್ ಮಾತನಾಡಿ, ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಹೊಂಡಗುಂಡಿಗಳ ಕಾಣಸಿಗುತ್ತಿದೆ ಎಂದರು. ಕಚೇರಿಗೆ ಅರ್ಜಿ ಸಲ್ಲಿಸಲು ಬರುವ ಅರ್ಜಿದಾರರನ್ನು ಆರಂಭದಲ್ಲೆ ತೆರಿಗೆ ಇತ್ಯಾದಿ ದಾಖಲೆಗಳಿಲ್ಲ ಎಂದು ವಾಪಸ್ ಕಳಿಸಲಾಗುತ್ತಿದೆ. ಇದರಿಂದ ಬಡವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಮಾ ಹೇಳಿದರು. ವಾರ್ಡ್ಗೆ ಬೀದಿ ದೀಪ ಅಳವಡಿಸುವಂತೆ ನಳಿನಿ ಒತ್ತಾಯಿಸಿದರು. ಪ್ರಾಧಿಕಾರದಲ್ಲಿ 300ಕ್ಕೂ ಅಧಿಕ ರಷ್ಟು ಕಡತಗಳು ವಿಲೆವಾರಿಗೆ ಬಾಕಿಯಿರುವ ಬಗ್ಗೆ ಶುಭದಾ ರಾವ್ ಪ್ರಸ್ತಾಪಿಸಿದರು. ದಲ್ಲಾಳಿಗಳ ನಿಯಂತ್ರಿಸಿಸುವಂತೆ ಹರೀಶ್ ಒತ್ತಾಯಿಸಿದರು. ಅಧಿಕಾರಿಗಳು ಎರಡು ದಿನ ಸಾರ್ವಜನಿಕರಿಗೆ ಸಿಗಬೇಕು ಎಂದು ಹರೀಶ್,ಯೊಗೀಶ್ ದೇವಾಡಿಗ ಒತ್ತಾಯಿಸಿದರು.
ಉಪಾಧ್ಯಕ್ಷೆ ಪಲ್ಲವಿರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ವೇದಿಕೆಯಲ್ಲಿದ್ದರು.