ಮಂಗಳೂರು, ಆ 18 (DaijiworldNews/PY): "ರಾಜ್ಯದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಜಂಟಿ ಸಹಯೋಗದಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದ ಚಿಂತನೆ ಇದೆ" ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಜನಾಶೀರ್ವಾದ ಯಾತ್ರೆ ಹಿನ್ನೆಲೆ ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನನ್ನ ಖಾತೆಯ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಇದೆ. ಮಣಿಪಾಲದಲ್ಲಿ ನಾನು ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿದ್ದೆ. ಹಾಗಾಗಿ, ನನಗೆ ಈ ಭಾಗದ ಜೊತೆ ಒಂದೊಳ್ಳೆ ಸಂಬಂಧವಿದೆ. ಆ ಕಾರಣಕ್ಕೆ ಈ ಭಾಗಕ್ಕೆ ನನ್ನ ಪೂರ್ಣ ನೆರವು ನೀದುವುದು ನನ್ನ ಕರ್ತವ್ಯ" ಎಂದರು.
"ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಗೆ ಒಂದು ಐಟಿ ಪಾರ್ಕ್ ಕೇಳಿದ್ದಾರೆ. ಈ ಬಗ್ಗೆ ನನ್ನಿಂದ ಆಗುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ. ಐಟಿ ತಂತ್ರಜ್ಞಾನ ಅಭಿವೃದ್ದಿ ಈ ದೇಶದ ಅತೀ ದೊಡ್ಡ ಭವಿಷ್ಯ. ಕೊರೊನೋತ್ತರ ಭಾರತದಲ್ಲಿ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಯಾಗಬೇಕು" ಎಂದು ತಿಳಿಸಿದರು.
"ಕೊರೊನಾದ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ನೆಟ್ ಯೋಜನೆಗೆ ಚಾಲನೆ ನೀಡಿದ್ದರು. ಅದನ್ನು ಮತ್ತಷ್ಟು ಉತ್ತಮವಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರ ಜೊತೆಗೆ 5 ಸಾವಿರ ಹಳ್ಳಿಗಳಿಗೆ ಇಂಟರ್ನೆಟ್ ತಲುಪಿಸುವ ಯೋಜನೆ ಹಾಕಿದ್ದೇವೆ. ಕೊರೊನಾದ ಮೊದಲು ಭಾರತ್ ನೆಟ್ ಯೋಜನೆಯ ಉದ್ದೇಶ ಬೇರೆ ಇತ್ತು. ಆದರೆ, ಕೊರೊನಾ ಬಳಿಕ ಭಾರತದಲ್ಲಿ ಸಾಮಾನ್ಯ ವ್ಯಕ್ತಿಗೂ ಸದ್ಯ ಇಂಟರ್ನೆಟ್ನ ಅವಶ್ಯಕತೆ ಇದೆ. ಆರೋಗ್ಯ ಸೇತುವಿನಿಂದ ಹಿಡಿದು ಎಲ್ಲದಕ್ಕೂ ಇಂಟರ್ನೆಟ್ ಬಳಕೆಯಾಗುತ್ತದೆ" ಎಂದರು.
"ಈಗಾಗಲೇ ನಾನು ನನ್ನ ಸಚಿವಾಲಯವನ್ನು ಇಂಟರ್ನೆಟ್ ಸಂಪರ್ಕದ ಅಧ್ಯಯನಕ್ಕೆ ಬಿಟ್ಟಿದ್ದೇನೆ. ಸಂಪರ್ಕದ ವಿಚಾರವಾಗಿ ಬಹಳಷ್ಟು ಅಭಿವೃದ್ದಿದಾಯಕ ನಡೆಯ ಅವಶ್ಯಕತೆ ಇದೆ. ನಾವು ತಂತ್ರಜ್ಞಾನದಲ್ಲಿ ಜಗತ್ತಿಗೆ ನಾಯಕರಾಗಬೇಕು ಎನ್ನುವುದು ಪ್ರಧಾನಿ ಮೋದಿ ಅವರ ವಿಷನ್. ಡಿಜಿಟಲ್ ಗ್ರಾಮ ಎನ್ನುವ ಕಲ್ಪನೆ ಸರ್ಕಾರದ ಪೈಲೆಟ್ ಯೋಜನೆ. ಕರ್ನಾಟಕದ ಪ್ರತೀ ಹಳ್ಳಿಗೂ ಇಂಟರ್ನೆಟ್ ಸಂಪರ್ಕಈ ಯೋಜನೆಯ ಉದ್ದೇಶವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಒಂದು ಹಳ್ಳಿಯನ್ನು ಈ ಯೋಜನೆಗೆ ಆಯ್ಕೆ ಮಾಡಿದ್ದೇವೆ. ಈಗಾಗಲೇ ಈ ಡಿಜಿಟಲ್ ಗ್ರಾಮ ಯೋಜನೆ ಆರಂಭವಾಗಿದೆ" ಎಂದು ತಿಳಿಸಿದರು.