ಮಂಗಳೂರು, ಆ18 (DaijiworldNews/MS): ಕೊರೊನಾ ತಗುಲಿದೆ ಎಂದು ಹಾಗೂ ಇತರ ಕಾರಣದಿಂದ ನೊಂದು ತಮ್ಮ ಜೀವನವನ್ನು ಕೊನೆಗೊಳಿಸಿದ್ದ ಗುಣವತಿ ಹಾಗೂ ರಮೇಶ್ ಸುವರ್ಣ ದಂಪತಿಗಳ ಕೊನೆಯ ಆಸೆಯಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಭಜರಂಗದಳದ ಮುಖಂಡರು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರವನ್ನು ಆಗಸ್ಟ್ 17 ರ ಮಂಗಳವಾರ ನಂದಿಗುಡ್ಡಯಲ್ಲಿ ನೆರವೇರಿಸಿದರು.
ಮಂಗಳವಾರ ಆಗಸ್ಟ್ 17 ರಂದು ಮುಂಜಾನೆ ದಂಪತಿಗಳು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಧ್ವನಿ ಸಂದೇಶಗಳನ್ನು ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಯಾವುದೇ ಆತುರದ ಕ್ರಮಗಳನ್ನು ತೆಗೆದುಕೊಳ್ಳದಂತೆ ಪೋಲಿಸ್ ಆಯುಕ್ತರು ತಕ್ಷಣವೇ ವಿನಂತಿಸಿದ್ದರು. ಏತನ್ಮಧ್ಯೆ, ಬೈಕಂಪಾಡಿಯಲ್ಲಿರುವ ಅಪಾರ್ಟ್ಮೆಂಟ್ ಅನ್ನು ಪತ್ತೆಹಚ್ಚಿದ ಪೊಲೀಸರು, ದಂಪತಿಗಳ ಸಹಾಯಕ್ಕಾಗಿ ಧಾವಿಸಿದ್ದರು. ಆದರೆ ಆದಾಗಲೇ ದಂಪತಿಗಳು ಸಾವಿಗೀಡಾಗಿದ್ದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿಎಚ್ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್, ದಂಪತಿಗಳು ತಾವು ಬರೆದಿದ್ದ ಡೆತ್ ನೋಟ್ ನಲ್ಲಿ ತಮ್ಮ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದು ಅವರ ಇಚ್ಛೆಗೆ ಅನುಗುಣವಾಗಿ ನಾವು ಅವರ ಅಂತ್ಯಕ್ರಿಯೆಯನ್ನು ನಂದಿಗುಡ್ಡ ಸ್ಮಶಾನದಲ್ಲಿ ಅವರ ಸಂಬಂಧಿಕರು ಮತ್ತು ವಿಎಚ್ಪಿ ಕಾರ್ಯಕರ್ತರೊಂದಿಗೆ ನಡೆಸಿದ್ದೇವೆ ಎಂದು ನೊಂದು ನುಡಿದರು.
"ಭರವಸೆ ಕಳೆದುಕೊಂಡು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ನಾವು ಜನರಿಗೆ ಮನವಿ ಮಾಡುತ್ತೇವೆ. ಕೋವಿಡ್ 19 ಗೆ ಚಿಕಿತ್ಸೆ ನೀಡಬಹುದು ಮತ್ತು ರೋಗಕ್ಕೆ ಔಷಧಿಗಳಿವೆ. ಲಸಿಕೆ ಕೇಂದ್ರಗಳು ಎಲ್ಲರಿಗೂ ಲಸಿಕೆ ಹಾಕುವ ಕೆಲಸ ಮಾಡುತ್ತಿವೆ. ಯಾರೂ ಭರವಸೆ ಕಳೆದುಕೊಳ್ಳಬಾರದು. ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಅಥವಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು" ಎಂದು ಇದೇ ವೇಳೆ ಅವರು ಮನವಿ ಮಾಡಿದರು