ಮಂಗಳೂರು, ಆ18 (DaijiworldNews/MS):ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ. ಮೂಡುಬಿದಿರೆ ಕುಖಿದಕಟ್ಟೆ ಮೂಡುಕೊಣಾಜೆ ಗ್ರಾಮದ ಅಶ್ವಿನಿ ಯಾನೆ ಮಮತಾ ಹಾಗೂ ಅದೇ ಗ್ರಾಮದ ಆನಂದ ಮೇರ ಶಿಕ್ಷಗೀಡಾದವರು.ಅಶ್ವಿನಿಯ ಪತಿ ಜಯರಾಜ್ ಕೊಲೆಯಾದವರು.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರಿನ ಜಯರಾಜ್ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. 2014ರಲ್ಲಿ ಅಶ್ವಿನಿ ಜತೆ ಅವರ ವಿವಾಹವಾಗಿದ್ದು, ಮೂಡುಬಿದಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2015ರಲ್ಲಿ ಅಶ್ವಿನಿ ಗರ್ಭವತಿಯಾಗಿ ತವರು ಮನೆಗೆ ಹೆರಿಗೆಗೆ ಹೋಗಿ 2016ರ ಆಗಸ್ಟ್ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ನಡುವೆ ಅದೇ ಊರಿನ ಹಳೆ ಪರಿಚಯದ ಆನಂದ ಮೇರನೊಂದಿಗೆ ಸಂಬಂಧವಿರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಜಯರಾಜ್ ಮತ್ತು ಅಶ್ವಿನಿ ನಡುವೆ ವೈಮನಸ್ಸು ಉಂಟಾಗಿತ್ತು. ತಾಯಿ ಮನೆಯಲ್ಲಿದ್ದ ಅಶ್ವಿನಿ, 2016ರ ಸೆಪ್ಟಂಬರ್ 3ರಂದುಪತಿ ಜಯರಾಜ್ನನ್ನು ಮನೆಗೆ ಕರೆಯಿಸಿ ಪ್ರಿಯಕರ ಆನಂದ ಮೇರನ ಜತೆ ಸೇರಿ ಕೊಲೆಗೆ ಸಂಚು
ರೂಪಿಸಿದ್ದರು.
ಜಯರಾಜ್ ಮನೆಗೆ ಬಂದಾಗ ಆನಂದ ಮೇರ ಕಬ್ಬಿಣದ ರಾಡ್ನಿಂದ ಜಯರಾಜ್ ತಲೆಗೆ ಹೊಡೆದು, ದೇಹದ ಭಾಗಗಳಿಗೆ ಹಲ್ಲೆ ಮಾಡಿ ಹೊಟ್ಟೆಗೆ ತಿವಿದು ಅಶ್ವಿನಿ ಸಹಕಾರ ಪಡೆದು ಕೊಲೆ ಮಾಡಿದ್ದ. ನಂತರ ಜಯರಾಜ್ನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಮನೆಯ ಹಿಂಬದಿಯಲ್ಲಿರುವ ಶಾಲೆಯ ಕಂಪೌಂಡ್ನ ಬಳಿ ಅಡಗಿಸಿಟ್ಟಿದ್ದರು. ಬಳಿಕ ಪಾಳುಬಾವಿಗೆ ಹಾಕಿದ್ದ ಮೃತದೇಹ ವಾಸನೆ ಬರದೆ ರಾಸಾಯನಿಕ ವಸ್ತುಗಳನ್ನು ಹಾಕಿದ್ದರು.
ಇದಲ್ಲದೆ ಕೊಲೆ ಮುಚ್ಚಿ ಹಾಕಲು ಆರೋಪಿ ಆನಂದ ಮೇರನುಜಯರಾಜ್ನನ್ನು ಅಪಹರಿಸಿರುವುದಾಗಿ ನಾಟಕ ಮಾಡುತ್ತಾನೆ.ಇದಕ್ಕೆ ಶ್ರೀಪತಿ ಮತ್ತು ಧನಪತಿ ಎಂಬವರು ಸಹಕರಿಸುತ್ತಾರೆ.ಜಯರಾಜ್ನ ಮೊಬೈಲ್ನ ಸಿಮ್ ಬಳಸಿ ಜಯರಾಜ್ನತಾಯಿಗೆ ಕರೆ ಮಾಡಿದ್ದ ಆರೋಪಿಗಳು 'ಜಯರಾಜ್ ನಮಗೆ 62 ಸಾವಿರ ರು. ನೀಡಬೇಕಿತ್ತು. ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದಿದ್ದೇವೆ. ಆತನಿಂದ ಬರಬೇಕಾದ ಹಣ ಬರುವವರೆಗೆ ಆತನನ್ನು ನಮ್ಮ ಜೊತೆ ದುಡಿಸಿ ಹಣ ವಸೂಲು ಮಾಡಿ ಬಳಿಕ ಕಳುಹಿಸುತ್ತೇವೆ' ಎಂದು ಹೇಳುತ್ತಾರೆ.
ಆರೋಪಿಗಳುಮಾಡಿದ ಪೋನ್ ಕರೆಯಿಂದ ಅನುಮಾನಗೊಂಡ ಜಯರಾಜ್ ಅವರ ಅಣ್ಣ ಗಿರೀಶ್ ಸೆ.22ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕೊಲೆ ನಡೆದಿರುವುದುಬೆಳಕಿಗೆ ಬಂದಿತ್ತು.