ಮಂಗಳೂರು, ಆ.17 (DaijiworldNews/HR): ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ತಡೆಯೊಡ್ಡಿದ ಪ್ರಕರಣದ ಆರೋಪಿಗಳ ಮೇಲೆ ದೇಶದ್ರೋಹ ಕೇಸು ದಾಖಲಿಸುವಂತೆ ವಿಶ್ವ ಹಿಂದೂ ಪರಿಷತ್, ಬಜಗರಂಗದಳ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಬರ್ಕೆ ಪೊಲೀಸ್ ಠಾಣೆಯ ಮುಂಬಾಗದಲ್ಲಿ ಆಂದೋಲನ ನಡೆಸಿದರು.
ಆಂದೋಲನದಲ್ಲಿ ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕಾಮತ್, "ಭಾರತದೊಳಗೆ ಸಂವಿಧಾನ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರಗಿಸಲು ಸರಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಅಂತಹ ಮಾನಸಿಕತೆಯನ್ನು ಅಳಿಸಿ ಹಾಕಲು ಕಾನೂನು ಪ್ರಕಾರ ಕಠಿಣ ಕ್ರಮ ಜರಗಿಸಲು ಬದ್ಧವಾಗಿದ್ದೇವೆ" ಎಂದು ಶಾಸಕ ಕಾಮತ್ ಹೇಳಿದರು.
ಕಬಕದಲ್ಲಿ ಸ್ವಾತಂತ್ರ್ಯ ರಥ ತಡೆದು ನಿಲ್ಲಿಸಿದ ಆರೋಪಿಗಳು ಹಾಗೂ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಮೂಲಭೂತವಾದಿಗಳಂತೆ ವರ್ತಿಸುವವರನ್ನು ಕಂಡು ಸುಮ್ಮನಿರಲಾಗುವುದಿಲ್ಲ. ಈ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಕಾನೂನಿನಡಿಯಲ್ಲಿ ಕಠಿಣ ಕ್ರಮ ಜರಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮುಖಂಡರು, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.