ಬಂಟ್ವಾಳ, ಆ.17 (DaijiworldNews/HR): ಗ್ರಾಮಪಂಚಾಯತ್ಗಳು, ಕಂದಾಯ ಇಲಾಖೆ ಸಹಿತ ಗ್ರಾಮಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕೊರೊನಾ ನಿರ್ಮೂಲನೆಗೆ ತೊಡಗಿಸಿಕೊಳ್ಳಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ಮಂಗಳವಾರ ಬಂಟ್ವಾಳ ತಾಲೂಕು ಮಟ್ಟದ ಕೋವಿಡ್ -19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಪ್ರಕರಣ ಹೆಚ್ಚಿರುವ ಕಡೆ ಹೆಚ್ಚಾಗಿ ಹೋಮ್ ಐಸೋಲೇಶನ್ ಒಳಗಾಗುವುದರಿಂದ ಸಮಸ್ಯೆಯಾಗುತ್ತಿದ್ದು, ಫಾಸಿಟಿವ್ ಧೃಢಪಟ್ಟವರನ್ನು ಅಧಿಕಾರಿಗಳು ಮನವೊಲಿಸಿ ಕೊರೋನಾ ಕೇರ್ ಸೆಂಟರ್ ಗೆ ದಾಖಲಿಸಲು ಮೊದಲ ಆದ್ಯತೆ ನೀಡಬೇಕು" ಎಂದರು.
ಸರಕಾರ,ಹಿರಿಯ ಅಧಿಕಾರಿಗಳು ಮಾಡುವ ಆದೇಶವನ್ನು ತಾಲೂಕು ಮಟ್ಟದ ಅಧಿಕಾರಿಗಳು ಅನುಷ್ಠಾನಕ್ಕೆ ತರುವಲ್ಲಿ ಹೆಚ್ಚು ಒತ್ತು ನೀಡುವುದರ ಜೊತೆಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸಚಿವರು ಸೂಚಿಸಿದರು.
ಕೋವಿಡ್ ಕೇರ್ ಸೆಂಟರ್ ನಲ್ಲಿ ಟಿ.ವಿ., ಪತ್ರಿಕೆ ಸಹಿತ ವಿವಿಧ ಸೌಲಭ್ಯದೊಂದಿಗೆ ಸುಸಜ್ಜಿತಗೊಳಿಸಿದರೆ ಸೋಂಕಿತರು ಕೇರ್ ಸೆಂಟರ್ ಗೆ ದಾಖಲಾಗುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ತಹಶೀಲ್ದಾರ್, ತಾ.ಪಂ.ಇಒ ಅವರು ಗಮನ ಹರಿಸುವಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸೂಚಿಸಿದರು.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಣ ಕೆಲಸ ಕೇವಲ ಆರೋಗ್ಯ ಇಲಾಖೆಗೆ ಮಾತ್ರ ಸೀಮಿತ ಅಲ್ಲ ಪಿಡಿಒ, ವಿ.ಎ.ಬೀಟ್ ಪೊಲೀಸ್ ರವರ ಸಹಿತ ಗ್ರಾಮಮಟ್ಟದ ಎಲ್ಲಾ ಅಧಿಕಾರಿಗಳು ಮುತುವರ್ಯ್ಜಿಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಈ ಸಂದರ್ಭ ಆದೇಶಿಸಿದರು.
ಇನ್ನು ಸೋಂಕಿತರು ಗಂಭೀರಾವಸ್ಥೆ ಒಳಗಾಗಿ ಹೋಮ್ ಐಸೋಲೇಶನ್ ನಲ್ಲಿ ಮೃತಪಟ್ಟರೆ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಯವರು ಮುಂದಿನ 6ತಿಂಗಳು ಅಥವಾ 1 ವರ್ಷದೊಳಗೆ ನಿವೃತ್ತಿಗೊಳ್ಳಲಿರುವ ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಆರೋಗ್ಯ ಸಹಾಯಕಿಯರ ಸಹಿತ ಸಿಬ್ಬಂದಿಗಳ ಹುದ್ದೆಯನ್ನುಹುದ್ದೆಗಳ ಭರ್ತಿಗೆ ಈಗಲೇ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದರು.
18 ವರ್ಷದಳೊಗಿನ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆಗೆ ಮಕ್ಕಳ ತಜ್ಞರ ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ಸಾರಿಗೆ ಐಸಿಯು ಬಸ್ ಗೆ ಮಕ್ಕಳ ತಜ್ಞರನ್ನು ನಿಯೋಜಿಸಿದಲ್ಲಿ ದಿನಕ್ಕೆರಡು ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಅನುಕೂಲವಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಸಲಹೆ ನೀಡಿದರು.ಇದಕ್ಕೆ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿ ಖಾಸಗಿ ವೈದ್ಯರನ್ನು ಬಳಸಿಕೊಳ್ಳುವಂತೆ ವೈದ್ಯಾಧಿಕಾರಿಯವರಿಗೆ ಸೂಚಿಸಿದರು.
ಇತರೆ ತಾಲೂಕಿಗೆ ಹೋಲಿಸಿದರೆ ಬಂಟ್ವಾಳ ತಾಲೂಕಿನಲ್ಲಿ ಕೋವಿಡ್ ನಿರ್ವ ಹಣೆ ಕಾರ್ಯ ಉತ್ತಮವಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ.ಅವರು ಆಗಸ್ಟ್ ಅಂತ್ಯದೊಳಗೆ ತಾಲೂಕಿನಲ್ಲಿ ಕೋವಿಡ್ ಪ್ರಕರಣ ಶೂನ್ಯ ಸಂಖ್ಯೆಗೆ ಇಳಿಕೆಯಾಗುವ ನಿಟ್ಟಿನಲ್ಲಿ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಸಹಾಯಕ ಕಮಿಷನರ್ ಮದನ್ ಮೋಹನ್ ವೇದಿಕೆಯಲ್ಲಿದ್ದು, ತಹಶೀಲ್ದಾರ್ ರಶ್ಮೀ ಎಸ್.ಆರ್., ಡಿವೈಎಸ್ಪಿ ವೆಲಂಟೀನ್ ಡಿಸೋಜ,ಶಿಕ್ಷಣಾಧಿಕಾರಿ ಜ್ಞಾನೇಶ್,ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು,ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.