ಕುಂದಾಪುರ, ಆ. 16 (DaijiworldNews/SM): ಕೋವಿಡ್ ನಿಂದಾಗಿ ಭಾಗಶಃ ಸಂಚಾರವನ್ನು ಸ್ಥಗಿತಗೊಳಿಸಿದ್ದ ಬೆಂಗಳೂರು-ಕಾರವಾರ ರೈಲು ಆ.16ರಿಂದ ಹೊಸ ವಿಸ್ಟಾಡೋಮ್ ಕೋಚ್ನೊಂದಿಗೆ ಮತ್ತೆ ಸಂಚಾರಕ್ಕೆ ಮುಕ್ತವಾಗಿದ್ದು ಈ ರೈಲನ್ನು ಕುಂದಾಪುರ ರೈಲು ನಿಲ್ದಾಣದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ಕೊಂಕಣ ರೈಲ್ವೇ ವಿಭಾಗೀಯ ಅಧಿಕಾರಿ ಬಿ.ಬಿ ನಿಕ್ಕಂ ಕುಂದಾಪುರದಲ್ಲಿ ರೈಲನ್ನು ಬರಮಾಡಿಕೊಂಡು ಪ್ರಯಾಣಿಕರಿಗೆ ಶುಭಹಾರೈಸಿದರು.
ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು ಮೊದಲು ಮಂಗಳೂರು ಜಂಕ್ಷನ್ವರೆಗೆ ಮಾತ್ರ ಸಂಚರಿಸುತ್ತಿದ್ದು ಕಾರವಾರಕ್ಕೆ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ರೈಲು ಸಂಚಾರ ಪುನಾರಂಭವಾಗಿದ್ದು, ಆ.16ರಿಂದ ರೈಲು ಕಾರವಾರದವರೆಗೂ ಸಂಚರಿಸಲಿದೆ. 06211 ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ಹೊರಡಲಿದ್ದು, 06212 ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರವಾರದಿಂದ ಯಶವಂತಪುರಕ್ಕೆ ಹೊರಡಲಿದೆ. ಪ್ರಕೃತಿಯ ರಮಣೀಯತೆ, ಪಶ್ಚಿಮ ಘಟ್ಟಗಳ ಸೊಬಗಿನ ನೋಟವನ್ನು ವಿಸ್ಟಾಡೋಮ್ ಕೋಚ್ನಲ್ಲಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ನದಿಗಳು, ಬೆಟ್ಟಗುಡ್ಡಗಳು, ಕೃಷಿಭೂಮಿ, ತೊರೆಗಳು ಸಹಿತ ನಯನಮನೋಹರ ದೃಶ್ಯಗಳ ಸೊಬಗು ವೀಕ್ಷಿಸಲು ಕರಾವಳಿಯಿಂದ ಕಾರಾವರದವರೆಗೂ ಅವಕಾಶವಿದೆ.
ರೈಲ್ವೇ ಹಿತರಕ್ಷಣಾ ಸಮಿತಿಯ ಹೋರಾಟ
ಕುಂದಾಪುರ ರೈಲು ನಿಲ್ದಾಣದಲ್ಲಿ ವಿವಿಧ ಕಡೆ ತೆರಳುವ ರೈಲು ನಿಲುಗಡೆ, ರೈಲು ನಿಲ್ದಾಣದ ಮೂಲಸೌಕರ್ಯ, ರಸ್ತೆ, ವಿದ್ಯುತ್ ಸೌಕರ್ಯ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಮೊದಲಿನಿಂದಲೂ ರೈಲ್ವೇ ಹಿತರಕ್ಷಣಾ ಸಮಿತಿ ಹೋರಾಡುತ್ತಲೇ ಬಂದಿದ್ದು ಬಹುತೇಕ ಎಲ್ಲಾ ಕಾರ್ಯ ಫಲಪ್ರದವಾಗಿದೆ. ಕಾರವಾರಕ್ಕೆ ರೈಲು ಸಂಚಾರ ಸ್ಥಗಿತವಾದ ಬಳಿಕ ಸ್ಥಳೀಯ ಪ್ರಯಾಣಿಕರು ಹಾಗೂ ಸಾರ್ವಜನಿಕರ ಅಹವಾಲಿನ ಮೇರೆ ಕಾರವಾರದವರೆಗೆ ರೈಲು ಸಂಚಾರ ಪುನರಾರಂಭಿಸಲು ಹಾಗೂ ವಿಸ್ಟಾಡೋಮ್ ಕೋಚ್ ಕಾರವಾರ ರೈಲಿಗೂ ಅಳವಡಿಸಲು ಹೋರಾಟ ಮಾಡಲಾಗಿತ್ತು. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಹಿತ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಹೋರಾಟಸಮಿತಿ ಮನವಿ ನೀಡಿದ್ದು ಸೂಕ್ತ ಸ್ಪಂದನೆ ಸಿಕ್ಕಂತಾಗಿದೆ.