ಕಾಸರಗೋಡು, ಆ. 16 (DaijiworldNews/SM): ಉತ್ತರ ಪ್ರದೇಶ ಮೂಲದ ಕ್ಷೌರದಂಗಡಿ ನೌಕರರ ಮೇಲೆ ಹಲ್ಲೆಗೈದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಪ್ಪಳ ಮುಳಿಂಜದ ಇರ್ಫಾನ್(43) ಎಂದು ಗುರುತಿಸಲಾಗಿದೆ.
ಕೃತ್ಯದಲ್ಲಿ ಶಾಮೀಲಾದ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ರವಿವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಉಪ್ಪಳ ರೈಲ್ವೆ ನಿಲ್ದಾಣ ರಸ್ತೆಯ ಫ್ಲ್ಯಾಟ್ ಗೆ ಅಕ್ರಮವಾಗಿ ನುಗ್ಗಿದ ಇರ್ಫಾನ್ ಹಾಗೂ ಇತರ ಇಬ್ಬರು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಮಾರಕಾಸ್ತ್ರ ತೋರಿಸಿ ಬೆದರಿಸಿ 21 ಸಾವಿರ ರೂಪಾಯಿ ದರೋಡೆ ಮಾಡಲಾಗಿತ್ತು. ಈ ಬಗ್ಗೆ ಉತ್ತರಪ್ರದೇಶ ಮೂಲದ ಆಲಂ ಎಂಬವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಇರ್ಫಾನ್ ನನ್ನು ಉಪ್ಪಳದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕೆಲ ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನು. ತಲೆ ಮರೆಸಿಕೊಂಡಿರುವ ಇತರ ಇಬ್ಬರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.