ಉಡುಪಿ, ಆ 16 (DaijiworldNews/PY): ಗೋಲ್ಡನ್ ಗರ್ಲ್ ಯೋಗರತ್ನ ಎಂದೇ ಪ್ರಖ್ಯಾತಿ ಪಡೆದ ತನುಶ್ರೀ ಪಿತ್ರೋಡಿಯವರು 43.18 ನಿಮಿಷಕ್ಕೆ 245 ವಿವಿಧ ಯೋಗಾಸನ ಭಂಗಿಗಳನ್ನು ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿ ಆಶೀರ್ವಚಿಸಿದರು. ರಾಜಾಂಗಣದ ವೇದಿಕೆಯಲ್ಲಿ ತನುಶ್ರೀಯವರು 245 ವಿವಿಧ ಕ್ಲಿಷ್ಟಕರ ವಾದ ಭಂಗಿಯನ್ನು ಪ್ರದರ್ಶಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯದ ಮುಖ್ಯಸ್ಥ ಮನೀಶ್ ವೈಷ್ಣವ್ ತೀರ್ಪುಗಾರರಾಗಿ ಆಗಮಿಸಿದ್ದರು. ತನುಶ್ರೀಯವರ ಯೋಗ ಪ್ರದರ್ಶನದ ನಂತರ ಮಾತನಾಡಿದ ಅವರು, "ನಾನು ಇಲ್ಲಿಯವರೆಗೆ ಎರಡು ಸಾವಿರ ದಾಖಲೆ ನೋಡಿದ್ದೇನೆ. ತನುಶ್ರೀಯ ಈ ದಾಖಲೆ ಅದ್ಭುತವಾಗಿದೆ. ಹಿಂದಿನ ದಾಖಲೆಯಲ್ಲಿ 1 ಗಂಟೆಯಲ್ಲಿ 145 ಆಸನದ ದಾಖಲೆ ಮುರಿದಿದ್ದಾರೆ" ಎಂದರು.
ತನುಶ್ರೀ ಪಿತ್ರೋಡಿ ಮಾತನಾಡಿ, "ಲಾಕ್ಡೌನ್ ಅವಧಿಯಲ್ಲಿ 180ಕ್ಕೂ ಅಧಿಕ ಆಸನಗಳನ್ನು ಕಲಿತೆ. ಜೊತೆಗೆ ಗುರುಗಳು ಸೂಚಿಸಿದ ಆಸನಗಳು ಸೇರಿದಂತೆ 245 ಆಸನಗಳನ್ನು ಸತತ ಪರಿಶ್ರಮದ ಮೂಲಕ ನಿಗದಿತ ಸಮಯದ ಮಿತಿಯೊಳಗೆ ಮಾಡಲು ಸಾಧ್ಯವಾಗಿದೆ. 7ನೇ ವಿಶ್ವದಾಖಲೆಯಲ್ಲಿ ಹೆಸರು ದಾಖಲಾಗಿರುವುದು ಸಂತಸ ತಂದಿದೆ" ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಉದ್ಯಾವರ ಪಿತ್ರೋಡಿ ಉದಯ್ ಕುಮಾರ್ -ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ ಉಡುಪಿಯ ಸೈಂಟ್ ಸಿಸಿಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಗಾಗಲೇ ಗುರುಗಳಾದ ರಾಮಕೃಷ್ಣ ಕೊಡಂಚ, ಯೋಗ ಗುರು ನರೇಂದ್ರ ಕಾಮತ್ ಕಾರ್ಕಳ ಹಾಗೂ ಡಾ ಶೋಭಿತ ಶೆಟ್ಟಿ, ಎಸ್ಡಿಎಂ ಪರೀಕ ಅವರಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, "ಐಷಾರಾಮಿ ಜೀವನದ ಹಿಂದೆ ಬಿದ್ದಿರುವ ಸಮಾಜ ಕೇವಲ ಸುಖ ಪಡೆಯಲು ಹಾತೊರೆಯುತ್ತಿದೆ. ಆಧ್ಯಾತ್ಮ ಯೋಗದತ್ತ ಆಸಕ್ತಿ ಕಡಿಮೆಯಾಗುತ್ತಿದೆ. ಮನುಷ್ಯ ಪ್ರಕೃತಿಯಿಂದ ವಿಮುಖನಾಗುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿವೆ. ಪ್ರಕೃತಿಗೆ ಹತ್ತಿರವಾಗಿ ಬದುಕಿದರೆ ಸಮಸ್ಯೆ ನಿವಾರಣೆಯಾಗುತ್ತದೆ" ಎಂದು ಹೇಳಿದರು.
ಶಾಸಕ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಚಿತ್ರರಂಜನ್ ಭಟ್, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಡಾ. ಶೋಭಿತ್, ಬಡಗುಬೆಟ್ಟು ಕ್ರೆಡಿಟ್ ಕೋ.ಆಪ್.ಸೊಸೈಟಿ ಆಡಳಿತ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ, ದಿವಾಕರ್ ಸನೀಲ್, ಯೋಗ ಗುರು ರಾಮಕೃಷ್ಣ ಕೊಡಂಚ, ನರೇಂದ್ರ ಕಾಮತ್ ಕಾರ್ಕಳ ಉಪಸ್ಥಿತರಿದ್ದರು.