ಕುಂದಾಪುರ, ಆ.16 (DaijiworldNews/HR): ಗ್ರಾಹಕರಲ್ಲಿಗೆ ಸಹಕಾರ ಹೋಗಬೇಕು, ಸಾಲ ಇಲ್ಲ ಎಂದು ಹಿಂದೆ ಕಳಿಸಬಾರದು. ಅವರ ಅಗತ್ಯತೆಯನ್ನು ಮನಗಂಡು ಸಾಲ ನೀಡಿ ಅಭಿವೃದ್ದಿಗೆ ಪ್ರೋತ್ಸಾಹಿಸಬೇಕು. ಇದು ನಮ್ಮ ಜನಗಳು ನಡೆಸುವ ಬ್ಯಾಂಕ್. ಜನರ ಆರ್ಥಿಕ ಮಟ್ಟ ಸುಧರಿಸಿದರೆ ಸಹಕಾರ ಕ್ಷೇತ್ರವೂ ಬೆಳೆಯುತ್ತದೆ. ಆ ಹಿನ್ನೆಲೆಯಲ್ಲಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಹಕಾರಿ ಸಂಘಗಳನ್ನು ಉತ್ತೇಜಿಸುವ ಸಲುವಾಗಿ ಠೇವಣಿಗಳ ಮೇಲೆ ಶೇ.1 ರ ಬಡ್ಡಿದರ ಹೆಚ್ಚಳ ಮಾಡಲಾಗುವುದು ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಮುತ್ತಯ್ಯ ಹೆಗ್ಡೆ ಬಿಲ್ಡಿಂಗ್ಗೆ ಸ್ಥಳಾಂತರಗೊಂಡ ಎಸ್ಸಿಡಿಸಿಸಿ ಬ್ಯಾಂಕ್ನ ಹುಣ್ಸೆಮಕ್ಕಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, "ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರ ಜನರ ಬಳಿಗೆ ಹೋಗಿ, ಅವರ ಆರ್ಥಿಕ ಸಬಲೀಕರಣ, ಸ್ವಾವಲಂಬಿ ಜೀವನಕ್ಕೆ ಉತ್ತೇಜನ ನೀಡುವ ಕೆಲಸ ಮಾಡುವ ಗುರಿ ಹೊಂದಿದೆ. ಜನರನ್ನು ಆರ್ಥಿಕವಾಗಿ ಅಭಿವೃದ್ದಿಗೊಳಿಸುವುದು ಸಹಕಾರ ಕ್ಷೇತ್ರದ ಆಶಯವಾಗಿದೆ. ಮಹಿಳೆಯರು ಕೂಡಾ ನವೋದಯ ಸ್ವಸಹಾಯ ಗುಂಪುಗಳ ಮೂಲಕ ಇನ್ನೂ ಪ್ರಗತಿ ಕಂಡುಕೊಳ್ಳಾಗಿದೆ" ಎಂದರು.
"ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಜನರ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ ಎನ್ನುವುದಕ್ಕೆ ಈ ಶಾಖೆಯ ಸ್ಥಳಾಂತರ ಸಂದರ್ಭ ವ್ಯಕ್ತವಾದ ವಿಶ್ವಾಸರ್ಹತೆಯೇ ಸಾಕ್ಷಿ. ಜನರ ನಂಬಿಕೆಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ಕ್ಲಪ್ತ ಸಮಯದಲ್ಲಿ ಪಡೆದ ಸಾಲ ಮರುಪಾವತಿ, ಹಾಗು ಸದ್ವಿನಿಯೋಗ ಆಗುತ್ತಿರುವುದು ಸಂತಷದ ವಿಚಾರ" ಎಂದಿದ್ದಾರೆ.
ಈ ಸಂದರ್ಭದಲ್ಲಿ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಮ್.ಮಹೇಶ ಹೆಗ್ಡೆ, ಕಟ್ಟಡ ಮಾಲೀಕರಾದ ಮಂಜಯ್ಯ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಜಯಕರ ಶೆಟ್ಟಿ ಇಂದ್ರಾಳಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರುಗಳಾದ ಎಂ.ವಾದಿರಾಜ ಭಟ್, ಶಶಿಕುಮಾರ ರೈ, ಕೆ.ಹರಿಶ್ಚಂದ್ರ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಬಿ.ಅಶೋಕ್ ಕುಮಾರ್ ಶೆಟ್ಟಿ, ಹುಣ್ಸೆಮಕ್ಕಿ ಶಾಖೆಯ ಶಾಖಾ ವ್ಯವಸ್ಥಾಪಕ ಬಿ.ಬಿ ಜೀವನ್ ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ಹೆಗ್ಡೆ ಹೌಸ್ನ ವಸಂತಿ ಮಂಜಯ್ಯ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವಿವಿಧ ಸಾಲಪತ್ರಗಳನ್ನು ವಿತರಿಸಲಾಯಿತು. ನೂತನವಾಗಿ ರಚನೆಗೊಂಡ ನವೋದಯ ಸ್ವಸಹಾಯ ಗುಂಪುಗಳ ಉದ್ಘಾಟನೆ, ಚೈತನ್ಯ ವಿಮಾ ಯೋಜನೆ ವಿಮಾ ಮೊತ್ತ ವಿತರಣೆ ಮಾಡಲಾಯಿತು.