ಬಂಟ್ವಾಳ, ಆ.16 (DaijiworldNews/HR): ಕೆಎಸ್ಆರ್ಟಿಸಿ ಸಾರಿಗೆ ಸಂಚಾರಿ ಸುರಕ್ಷಾ ಐಸಿಯು ಬಸ್ನಲ್ಲಿ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹೃದ್ರೋಗ ತಪಾಣೆಯ ಇಸಿಜಿ ಯಂತ್ರವನ್ನು ಅಳವಡಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಗ್ರಾಮೀಣ ಜನರ ಉತ್ತಮ ಆರೋಗ್ಯ ರಕ್ಷಣೆಗಾಗಿ ಉತೃಷ್ಠವಾದ ಉಚಿತ ಸೇವೆ ನೀಡುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ವಿಶೇಷ ಮುತುವರ್ಜಿಯಿಂದ ಆರಂಭಿಸಲಾದ ಕೆಎಸ್ಆರ್ಟಿಸಿ ಸಾರಿಗೆ ಸಂಚಾರಿ ಸುರಕ್ಷಾ ಐಸಿಯು ಬಸ್ ಸೋಮವಾರ ಬಂಟ್ವಾಳ ತಾ.ಸರಪಾಡಿ ಗ್ರಾ.ಪಂ. ಕಚೇರಿ ವಠಾರದಲ್ಲಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದ್ದು, ಶಾಸಕ ರಾಜೇಶ್ ನಾಯ್ಕ್ ಅವರು ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಬಸ್ನಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಜತೆಗೆ ಸ್ಥಳೀಯರ ಸಲಹೆ ಮೇರೆಗೆ ಹೃದಯದ ಆರೋಗ್ಯ ತಪಾಸಣೆಗೆ ಇಸಿಜಿ ಯಂತ್ರದ ವ್ಯವಸ್ಥೆ ಕೂಡಾ ಕಲ್ಪಿಸಲಾಗುತ್ತಿದ್ದು, ಮಂಗಳವಾರವೇ ಈ ಯಂತ್ರ ಅಳವಡಿಲಾಗುವುದು" ಎಂದರು.
ಪೊಳಲಿಯಲ್ಲಿ ಚಾಲನೆಗೊಂಡ ಐಸಿಯು ಬಸ್ ಬಂಟ್ವಾಳ ಕ್ಷೇತ್ರದ 39 ಗ್ರಾ.ಪಂ.ಗಳಿಗೂ ಸಂಚರಿಸಲಿದ್ದು, ಈಗಾಗಲೇ 21 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ ಇದುವರಗೆ 1303 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವ್ಯವಸ್ಥೆಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆರೋಗ್ಯ ತಪಾಸಣೆಗಾಗಿ ದೂರದ ಆಸ್ಪತ್ರೆಗೆ ಹೋಗಲು ಅಸಾಧ್ಯವಾದವರು ಈ ಬಸ್ನಲ್ಲಿಯೇ ತಮ್ಮ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಐಸಿಯು ಬಸ್ನಲ್ಲಿ5 ಬೆಡ್, ಆಮ್ಲಜನಕ ವ್ಯವಸ್ಥೆ ಇದ್ದು, ಓರ್ವ ವೈದ್ಯೆ, ಸ್ಟಾಫ್ ನರ್ಸ್, ಮತ್ತು ಸ್ಥಳೀಯ ಆರೋಗ್ಯ ಸಿಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧು ಮೇಹ, ರಕ್ತದೊತ್ತಡ ಸಹಿತ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಶಾಸಕರು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಬಿ.ಸಿ.ರೋಡ್ನಿಂದ ಸರಪಾಡಿಗೆ ಈಗಿರುವ ಸರಕಾರಿ ಬಸ್ ಸಂಚಾರದ ವೇಳಾಪಟ್ಟಿ ಸರಿಪಡಿಸುವಿಕೆ ಮತ್ತು ಹೆಚ್ಚುವರಿ ಬಸ್ ಸಂಚರಿಸಲು ವ್ಯವಸ್ಥೆ, ಪಿಂಚಣಿ ಸೌಲಭ್ಯ, ದೈವಸ್ಥಳ ಪ್ರಾ. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು, ಮೊದಲಾದ ವಿವಿಧ ಬೇಡಿಕೆಗಳನ್ನು ಸಾರ್ವಜನಿಕರು ಶಾಸಕರ ಮುಂದಿರಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಇದನ್ನು ಈಡೇರಿಸುವ ಭರವಸೆ ನೀಡಿದರು. ಸ್ಥಗಿತಗೊಂಡಿರುವ ಅಜಿಲಮೊಗರು-ಕಡೇಶಿವಾಲಯ ಸಂಪರ್ಕ ಸೇತುವೆ ಕಾಮಗಾರಿ ಮಳೆಗಾಲ ಮುಗಿದ ತತ್ಕ್ಷಣ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ ಎಂದಿದ್ದಾರೆ.
ಬಳಿಕ ಶಾಸಕರು ಗ್ರಾ.ಪಂ. ಆವರಣದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲ ಜೀವನ್ ಮಿಷನ್ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ನಳಿನಿ, ಪಂ.ಅ. ಅಧಿಕಾರಿ ಸಿಲ್ವಿಯಾ ಫೆರ್ನಾಂಡಿಸ್, ಗ್ರಾ.ಪಂ. ಸದಸ್ಯರಾದ ಎನ್. ಧನಂಜಯ ಶೆಟ್ಟಿ,ರಾಮಕೃಷ್ಣ ಮಯ್ಯ, ದಿನೇಶ್ ಗೌಡ, ಸೌಮ್ಯಲತಾ, ಶಾಂತಪ್ಪ ಪೂಜಾರಿ ಹಟದಡ್ಕ, ಕುಸುಮಾ,ಪ್ರಮುಖರಾದ ಸುದರ್ಶನ ಬಜ, ಗಣೇಶ್ ರೈ ಮಾಣಿ,ಶಶಿಕಾಂತ್ ಶೆಟ್ಟಿ ಆರುಮುಡಿ, ದಯಾನಂದ ಶೆಟ್ಟಿ ಮುನ್ನಲಾಯಿ, ವಿಶ್ವನಾಥ ನಾಯ್ಕ, ವಿಶ್ವನಾಥ ಪೂಜಾರಿ, ಕೊರಗಪ್ಪ ಗೌಡ, ನಿಶಾಂತ್ ಶೆಟ್ಟಿ, ಪೂವಪ್ಪ ಪೂಜಾರಿ ಬೊಳ್ಳುಕಲ್ಲು ಮತ್ತಿತರರು ಉಪಸಿತ್ಥರಿದ್ದರು.