ಕಾರ್ಕಳ, ಆ 16 (DaijiworldNews/PY): "ಆಧುನಿಕ ಕಾಲಘಟ್ಟದಲ್ಲಿ ಮೌಲ್ಯಧಾರಿತ ಶಿಕ್ಷಣ ದೊಂದಿಗೆ ಸಂಸ್ಕಾರ, ಸಂಸ್ಕೃತಿಗಳು ವಿದ್ಯಾರ್ಥಿಗಳಿಗೆ ನೀಡುವ ಜವಾಬ್ದಾರಿ ನಮ್ಮದಾಗಬೇಕು. ಅಗಮಾತ್ರ ಗುರುಗಳನ್ನು, ಹಿರಿಯಯರನ್ನು ಗೌರವದಿಂದ ಕಾಣಬಹುದಾಗಿದೆ. ಪರರ ಸೇವೆಯೇ ಪರಮಾತ್ಮನ ಸೇವೆಯಾಗಿದೆ. ಸಮಾಜಮುಖಿ ಚಿಂತನೆಗಳಿಂದ ಸಂತೃಪ್ತಿ ಪಡೆಯಬಹುದು" ಎಂದು ಲಯನ್ಸ್ ಕ್ಲಬ್ನ ಅಧ್ಯಕ್ಷ ರಾಜೇಶ್ ಶೆಣೈ ಹೇಳಿದರು.
ಲಯನ್ಸ್ ಕ್ಲಬ್ ಕಾರ್ಕಳ ಆಶ್ರಯದಲ್ಲಿ ಹೋಟೆಲ್ ಪ್ರಕಾಶ್ನ ಸಂಭ್ರಮ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2020-21 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ದುರ್ಗ ತೆಳ್ಳಾರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿಕ್ರಮ್ ಹಾಗೂ ಆತನ ತಾಯಿ ಲತಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿರುವುದು ವಿಶೇಷವಾಗಿತ್ತು.
ಬ್ಯಾಂಕ್ನ ನಿವೃತ್ತ ಮಹಾಪ್ರಬಂಧಕ ಐ. ರವೀಂದ್ರನಾಥ ಪೈ , ಬ್ಯಾಂಕ್ನ ನಿವೃತ್ತ ಅಧಿಕಾರಿ ಲಕ್ಷ್ಮೀ ಆರ್. ಪೈ, ದುರ್ಗ ತೆಳ್ಳಾರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸ್ಮಿತಾ ಭಂಡಾರಿ, ಶಿಕ್ಷಕ ಶಿವರಾಜ್ ಕೆ., ರವಿ, ಲಯನ್ಸ್ ಕ್ಲಬ್ನ ಪ್ರಮುಖರಾದ ಮಿಥುನ್ ಆರ್. ಹೆಗ್ಡೆ, ಸುಭಾಷ್ ಸುವರ್ಣ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಪಿಂಟೋ ಉಪಸ್ಥಿತರಿದ್ದರು.
ದೇವರಾಯ ಪ್ರಭು ನಿರೂಪಿಸಿದರು.