ಕುಂದಾಪುರ, ಆ 16 (DaijiworldNews/PY): ಕೊರೊನಾ ಮೊದಲು ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ತಾಲೂಕು ಆಸ್ಪತ್ರೆಗಳ ಪೈಕಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ಆಸ್ಪತ್ರೆ ರಾಜ್ಯದಲ್ಲೆ ಉತ್ತಮವಾಗಿದೆ ಎಂಬ ಹೆಗ್ಗಳಿಕೆ ನಡುವೆ ಇಲ್ಲಿನ ಅಗತ್ಯತೆ ಮನಗಂಡು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮುತುವರ್ಜಿಯಿಂದ ಸುಸಜ್ಜಿತ ಆಕ್ಸಿಜನ್ ಫ್ಲಾಂಟ್ ನಿರ್ಮಾಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.
ಕೊರೊನಾ ಎರಡೂ ಅಲೆಗಳ ಸಂದರ್ಭ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಂದು ಭಾಗವನ್ನು ಬಹುತೇಕ ಕೊರೊನಾ ಆಸ್ಪತ್ರೆಯನ್ನಾಗಿಸಲಾಗಿತ್ತು. ಬಹುತೇಕ ಮೊದಲಿನಿಂದಲೂ ಆಕ್ಸಿಜನ್ ಕೊರತೆ ನೀಗಿಸುವಲ್ಲಿ ಇಲ್ಲಿನ ವೈದ್ಯಾಧಿಕಾರಿಗಳ ನೇತೃತ್ವದ ತಂಡ ರಾತ್ರಿಹಗಲನ್ನೆದೆ ಕೆಲಸ ಮಾಡಿದ್ದರೂ ಕೂಡ ತಜ್ಞರ ವರದಿಯಂತೆ ಮೂರನೇ ಅಲೆಯ ಸಂಭಾವ್ಯದ ಹಿನ್ನೆಲೆ ಸಂಪೂರ್ಣ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನಿವಾರಣೆಗೆ 60 ಲಕ್ಷ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವೈದ್ಯಕೀಯ ಆಮ್ಲಜನಕ ಘಟಕ ಅಥವಾ ಮೆಡಿಕಲ್ ಆಕ್ಸಿಜನ್ ಫ್ಲಾಂಟ್ ನಿರ್ಮಿಸಲಾಗಿದೆ.
ವಾತಾವರಣದಲ್ಲಿರುವ ಗಾಳಿಯಲ್ಲಿ ಆಮ್ಲಜನಕ ಸಹಿತ ನೈಟ್ರೋಜನ್ ಹಾಗೂ ಇತರ ಅನಿಲಗಳಿರುತ್ತದೆ. ಆ ಗಾಳಿಯಿಂದ ಶುದ್ಧ ಆಮ್ಲಜನಕವನ್ನು ಬೇರ್ಪಡಿಸಿ ಶುದ್ಧ ಆಮ್ಲಜನಕವನ್ನು ಘಟಕಕ್ಕೆ ಸೇರಿಸುವ ಮೂಲಕ ಅದನ್ನು ವೈದ್ಯಕೀಯ ಉಪಯೋಗಕ್ಕೆ ಬಳಸಲಾಗುತ್ತದೆ. ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ ಘಟಕವನ್ನು ನಿರ್ಮಿಸಲು ಗೇಲ್ ಎನ್ನುವ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದ್ದು ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ನೋಯ್ಡಾ ಮೂಲದ ಮಾಲೆಸ್ಸಿವ್ ಕಂಪೆನಿ ನೋಡಿಕೊಳ್ಳಲಿದೆ. ಗೇಲ್ ಸಂಸ್ಥೆ ದೇಶದಲ್ಲಿ ಒಟ್ಟು 12 ಕಡೆ ಈ ಆಕ್ಸಿಜನ್ ಫ್ಲಾಂಟ್ ನಿರ್ಮಾಣ ಜವಾಬ್ದಾರಿ ಪಡೆದಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಘಟಕ ನಿರ್ಮಿಸಿದೆ.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ರಾಬರ್ಟ್ ರೆಬೆಲ್ಲೋ ಹಾಗೂ ಕೊರೊನಾ ನೋಡಲ್ ವೈದ್ಯಾಧಿಕಾರಿ ಡಾಕ್ಟರ್ ನಾಗೇಶ್ ನೇತೃತ್ವದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಅವಿರತ ಶ್ರಮ ವಹಿಸುತ್ತಿದೆ. ಉಡುಪಿ ಜಿಲ್ಲಾಡಳಿತ, ಕುಂದಾಪುರ ತಾಲ್ಲೂಕು ಆಡಳಿತ, ಜಿಲ್ಲಾಆರೋಗ್ಯ ಇಲಾಖೆ ಇವರಿಗೆ ಬೆನ್ನೆಲುಬಾಗಿ ನಿಂತಿದ್ದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೂಡ ಅಗತ್ಯ ಸಲಹೆ ಸಹಕಾರದ ಜೊತೆ ಅಗತ್ಯ ಉಪಕರಣಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದರು. ಇಲ್ಲಿಗೆ ಆಕ್ಸಿಜನ್ ಫ್ಲಾಂಟ್ ನಿರ್ಮಾಣದ ಹಿಂದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಶ್ರಮವೂ ಇದೆ.