ಕಾರ್ಕಳ, ಆ 16 (DaijiworldNews/PY): "ಜ್ವರ ಬಂದಾಗ ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಸೊಳ್ಳೆಯನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಸ್ವಚ್ಚತೆಗೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡಬೇಕು" ಎಂದು ಪುರಸಭಾ ಉಪಾಧ್ಯಕ್ಷೆ ಪಲ್ಲವಿ ರಾವ್ ಹೇಳಿದರು.
ಕಾರ್ಕಳದ ಪುಲ್ಕೇರಿ ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಮಲೇರಿಯಾ ವಿರೋಧಿ ಮಾಸಾಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಹರೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, "ಜಾಗೃತಿಯಿಂದ ಸಮಾಜ ಎಚ್ಚೆತ್ತುಕೊಳ್ಳುತ್ತದೆ. ಆ ಮೂಲಕ ಮುಂದೆ ಘಟಿಸಬಹುದಾದ ಅನಾಹುತಗಳು ತಪ್ಪಿಸಿಕೊಳ್ಳಲು ಸಹಕಾರಿಯಾಗುತ್ತದೆ" ಎಂದರು.
ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅನಂತ್ ಕಾಮತ್ ಮಾತನಾಡಿ, "ಮಲೇರಿಯಾದ ಕುರಿತು ಅನಗತ್ಯ ಭಯ ಪಡಬೇಕಿಲ್ಲ. ಮಳೆಗಾಲದಲ್ಲಿ ಹೆಚ್ಚಾಗಿ ತೆರದ ಜಾಗಗಳಲ್ಲಿ ತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಮುಂಜಾಗೃತೆ ವಹಿಸಿಕೊಳ್ಳಬೇಕು. ಸಾಂಕ್ರಮಿಕ ರೋಗಗಳು ಮಾನವನ ದೇಹಕ್ಕೆ ಸಂಚಕಾರವನ್ನು ಉಂಟು ಮಾಡಬಹುದು" ಎಂದರು.
ಪುರಸಭಾ ಸದಸ್ಯರಾದ ಮೀನಾಕ್ಷಿ, ಪ್ರಶಾಂತ್ ಕೋಟ್ಯಾನ್, ಯೋಗಿಶ್ ದೇವಾಡಿಗ ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ಸಹಾಯಕ ಬಿ.ವಿ. ಶಿವರಾಮರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್. ನಿರೂಪಿಸಿ, ವಂದಿಸಿದರು.