ಪುತ್ತೂರು, ಆ.16 (DaijiworldNews/HR): ಕಬಕದಲ್ಲಿ ಸ್ವಾತಂತ್ರ್ಯದ ರಥವನ್ನು ತಡೆದು ದಾಂಧಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಬಕದ ವಿದ್ಯಾಪುರ ನಿವಾಸಿ ಕೆ ಅಜೀಜ್ (43), ಕಬಕದ ಮುರ ನಿವಾಸಿ ಶಮೀರ್ (40) ಮತ್ತು ಕೊಡಿಪ್ಪಾಡಿ ಗ್ರಾಮದ ನಿವಾಸಿ ಅಬ್ದುಲ್ ರೆಹಮಾನ್ (34) ಎಂದು ಗುರುತಿಸಲಾಗಿದೆ.
ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮತ್ತು ಐಪಿಸಿಯ ಇತರ ವಿಭಾಗಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.
ರಥದಲ್ಲಿ ಮಹಾನ್ ಪುರುಷರದ ಸಂಗೊಳ್ಳಿ ರಾಯಣ್ಣ, ವೀರ ಸಾವರ್ಕರ್ ಭಾವಚಿತ್ರ ಹಾಕಲಾಗಿದ್ದು ರಥದಲ್ಲಿನ ಮಹಾನ್ ಪುರುಷರ ಭಾವಚಿತ್ರ ತೆಗೆದು ಇತರ ಫೊಟೋ ಅಳವಡಿಸಬೇಕೆಂದು ಎಸ್ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯದ ರಥ ತಡೆಹಿಡಿದು, ದಾಂಧಲೆ ನಡೆಸಿ ಟಿಪ್ಪು ಸುಲ್ತಾನ್ ಅವರ ಫೋಟೋವನ್ನು ಪ್ರದರ್ಶಿಸುವಂತೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
ಆಶಾ ಕಾರ್ಯಕರ್ತೆಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೀಡಿರುವ ಪೊಲೀಸ್ ದೂರಿನಲ್ಲಿ, ಕಬಕ ಗ್ರಾಮ ಪಂಚಾಯತ್ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಂದು ವಾಹನದಲ್ಲಿ 'ಭಾರತ್ ಮಾತಾ' ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ಕೇಂದ್ರ ಸರ್ಕಾರದ ಮಾಹಿತಿಯನ್ನು ಪ್ರಸಾರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಈ ವೇಳೆ ಆರೋಪಿಗಳಾದ ಅಜೀಜ್, ನೌಶಾದ್, ಶಮೀರ್, ಹಾರಿಸ್, ಅದ್ದು, ತೌಸಿಫ್, ಶಾಫಿ ಮತ್ತು ಇತರರು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸುವುದನ್ನು ತಡೆದಿದ್ದು, ಭಾರತ್ ಮಾತಾ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143,147, 269, 353, 323, 427 ಮತ್ತು 149 ಮತ್ತು 2 (ಎ) ಕೆಪಿಡಿಎಲ್ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.