ಕಾರ್ಕಳ, ಆ 15 (DaijiworldNews/PY): "ಶಿಕ್ಷಣ, ಉದ್ಯೋಗವು ನಾಗರಿಕರ ಸ್ವಾವಲಂಬನೆ ಬದುಕು ಪ್ರೇರಣೆಯಾಗುತ್ತದೆ. ಸಮಾನತೆ, ಸೌಹಾರ್ದತೆ, ವಿಶ್ವಾಸದ ಜೊತೆಗೆ ಧಾರ್ಮಿಕ ನಂಬಿಕೆಯು ಪ್ರತಿಯೊಬ್ಬ ನಾಗರಿಕರನಲ್ಲಿ ಇರಲೇ ಬೇಕು. ಆ ಮೂಲಕ ದೇಶದಲ್ಲಿ ಅಭಿವೃದ್ಧಿಯೊಂದಿಗೆ ಶಾಂತಿ ಸಹಬಾಳ್ವೆ ನಡೆಸಲು ಸಾಧ್ಯ" ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಹೇಳಿದರು.
ಕಾರ್ಕಳ ಲಯನ್ಸ್ ಭವನದಲ್ಲಿ ಆಯೋಜಿಸಿದ 75ನೇ ಸ್ವಾತಂತ್ರ್ಯೋವದ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, "ದೇಶದಲ್ಲಿ ಅಂದು ಕಾಡುತ್ತಿದ್ದ ಅಸಮಾನತೆ, ಸಂಕುಚಿತ ಹಾಗೂ ದಾಸ್ಯ ಮನೋಭಾವವು ಬ್ರಿಟಿಷರು ಭಾರತವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಡುವಂತೆ ಮಾಡಿತು. ಸ್ವಾತಂತ್ರ್ಯ ಭಾರತಕ್ಕಾಗಿ ಅದೆಷ್ಟೋ ದೇಶಭಕ್ತ ಬಲಿದಾನವಾಗಿದ್ದರು. ಅವರ ಹೋರಾಟ, ದೇಶಭಕ್ತಿಯ ಕುರಿತು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಂಡು ಅವರನ್ನು ಗೌರವಿಸಬೇಕು" ಎಂದರು.
ಕೊರೊನಾ ವಾರಿಯರ್ಗಳಾಗಿ ಸೇವೆ ಸಲ್ಲಿಸಿದ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ನರ್ಸ್ ಹಾಗೂ ಆಶಾ ಕಾರ್ಯಕರ್ತರನ್ನು ಶಾಲು ಹೊದಿಸಿ, ಫಲಪುಷ್ಟ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ನರ್ಸ್, ಆಶಾಕಾರ್ಯಕರ್ತರು, ರಿಕ್ಷಾ ಚಾಲಕರಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ನೆರವಿನ ಹಸ್ತ ಚಾಚಲಾಯಿತು.
ಲಯನ್ಸ್ ಕ್ಲಬ್ನ ಪ್ರಮುಖರಾದ ಮಿಥುನ್ ಹೆಗ್ಡೆ, ಸುಭಾಸ್, ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಖಜಾಂಚಿ ಪ್ರಕಾಶ್ ಪಿಂಟೋ ಉಪಸ್ಥಿತರಿದ್ದರು.