Karavali
ಮಂಗಳೂರು: ಜಿಲ್ಲೆಯಲ್ಲಿ ಸಂಭ್ರಮದ 75ನೇ ಸ್ವಾತಂತ್ರ್ಯೋತ್ಸವ
- Sun, Aug 15 2021 11:45:26 AM
-
ಮಂಗಳೂರು, ಆ 15 (DaijiworldNews/PY): ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಈ ವೇಳೆ ಮಾತನಾಡಿದ ಅವರು, "ಮೊಟ್ಟ ಮೊದಲಿಗೆ ನಾನು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಸಮರ್ಪಣೆ ಮಾಡಿಕೊಂಡ ಎಲ್ಲಾ ಹಿರಿಯರಿಗೆ ಶಿರಬಾಗಿ ನನ್ನ ನಮನಗಳನ್ನು ಅರ್ಪಿಸಿಕೊಳ್ಳುತ್ತಿದ್ದೇನೆ" ಎಂದರು.
"ನಮ್ಮ ದೇಶವಿಂದು ಇಡೀ ವಿಶ್ವದಲ್ಲೇ ಒಂದು ಚಾರಿತ್ರಿಕ ಕಾಲಘಟ್ಟದಲ್ಲಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು75 ವರ್ಷ ತುಂಬಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಅಮೃತ ಮಹೋತ್ಸವ ಎನ್ನಲಾಗುತ್ತಿದೆ. ಪ್ರಧಾನ ಮಂತ್ರಿಗಳು ಜನತೆ ಅಪೇಕ್ಷೇಯಂತೆ ನಾವೆಲ್ಲಾ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಮೃತ ಘಳಿಗೆಯಲ್ಲಿದ್ದೇವೆ" ಎಂದರು.
"ಅನೇಕ ಶತಮಾನಗಳು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ನಂತರ ನಮಗೆ ಸಿಕ್ಕಿದ ಸ್ವಾತಂತ್ರ್ಯಕ್ಕೆ ಅದೆಷ್ಟು ಜೀವ ಬಲಿದಾನವಾಗಿದೆ. ಅದೆಷ್ಟೋ ಕಷ್ಟನಷ್ಟಗಳನ್ನು ನಮ್ಮ ಹಿರಿಯರು ಅನುಭವಿಸಿದರು. ಅದೆಲ್ಲವೂ ಒಂದು ಇತಿಹಾಸ. ಆದರೆ ಅದನ್ನು ಮರೆಯದೆ ನಮ್ಮ ರಾಷ್ಟ್ರದ ಸ್ವತಂತ್ರ-ಸಾರ್ವಭೌಮ ಜೀವನವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಸುವರ್ಣ ಸಂದರ್ಭ ನಮಗೆ ಇಂದು ಒದಗಿ ಬಂದಿದೆ. ಅನೇಕ ಗಂಭೀರ ಸವಾಲಿನ ಮಧ್ಯೆಯೂ ರಾಷ್ಟ್ರ ಜೀವನದ ಭಿನ್ನತಾ ಮೌಲ್ಯಗಳ ಅಡಿಗಲ್ಲಿನಲ್ಲಿ ಈ ಸವಾಲುಗಳಿಗೆ ಉತ್ತರ ಕೊಡಬೇಕಾಗಿದೆ. ಕಳೆದ 75 ವರ್ಷಗಳ ಪರಿಶ್ರಮದ ನಂತರವೂ ದೇಶವಾಸಿಗಳ ಪೈಕಿ ಕಟ್ಟ ಕಡೆಯ ಬಡವನವರೆಗೆ ಕೋಟಿ ಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವಾತಂತ್ರ್ಯದ ಅಮೃತ ಸ್ಪರ್ಶ ಅನುಭವಕ್ಕೆ ಬರುತ್ತಿದೆಯಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ" ಎಂದು ಹೇಳಿದರು.
"ಅತ್ಯಂತ ಸರ್ವ ಸಂಪದ್ಭರಿತವಾಗಿದ್ದ ಈ ದೇಶದ ಮೇಲೆ ಕಳ್ಳದೃಷ್ಠಿಯಿಂದ ಬಂದ ಬ್ರಿಟೀಷರಾದಿಯಾಗಿ ಎಲ್ಲಾ ವಿದೇಶಿಗಳು, ಭಾರತವನ್ನು ದುರ್ಬಲಗೊಳಿಸಿದರು. ಇದರೊಳಗೆ ನಮ್ಮದೇ ಕೆಲ ದೌರ್ಬಲ್ಯ ಕೂಡಾ ಸೇರಿಕೊಂಡಿದೆ. ಆದರೆ ಅದನ್ನು ಮೆಟ್ಟಿ ನಿಲ್ಲುವಲ್ಲಿ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಐತಿಹಾಸಿಕ ದಿನ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಆದರೆ ಈ ಸಂದರ್ಭದಲ್ಲಿ ನಾವೆಲ್ಲಾ ನೆನಪು ಮಾಡಿಕೊಳ್ಳಬೇಕಾದ ಈ ಭಾಗದ ಹೋರಾಟವೊಂದಿದೆ. 1835-1837ರಲ್ಲಿ ಅಮರ ಸುಳ್ಯದ ಹೋರಾಟ, ಕೊಡಗಿನಿಂದ-ಮಂಗಳೂರಿನವರೆಗೆ ಆಂಗ್ಲರ ಎದೆ ನಡುಗಿಸಿದ ಇತಿಹಾಸ ಮರೆಯದಿರೋಣ" ಎಂದು ತಿಳಿಸಿದರು.
"ಬಾಲಗಂಗಾಧರ್, ತಿಲಕ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿ ರಾಣಿ ಚೆನ್ನಮ್ಮ, ಮಹಾತ್ಮ ಗಾಂಧೀಜಿ, ಉಳ್ಳಾಲ ರಾಣಿ ಅಬ್ಬಕ್ಕ ಮುಂತಾದ ಮಹಾನ್ ನಾಯಕರ ಕಾರಣದಿಂದ ತ್ರಿವರ್ಣಧ್ವಜ ನಭೋಮಂಡಲದಲ್ಲಿ ಅರಳಿತು" ಎಂದು ಹೇಳಿದರು.
"ಕೊರೊನಾ ಸೋಂಕಿನ ಕಷ್ಟಕಾಲದಲ್ಲಿ ನಮ್ಮೆಲ್ಲರ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಸಿಕ್ಕಿರುವುದು ಪುಣ್ಯವೆಂದರೆ ತಪ್ಪಾಗಲಾರದು. ಕರ್ನಾಟಕ ಘನ ಸರಕಾರದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಮ್ಮ ಸರಕಾರ ಅನೇಕ ಅಭಿವೃದ್ಧಿ ಕಾರ್ಯದ ಜೊತೆ ಆರ್ಥಿಕ-ಸಾಮಾಜಿಕ ಚಟುವಟಿಕೆಗೆ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದೆ" ಎಂದು ತಿಳಿಸಿದರು.
"ಪ್ರಧಾನಿಗಳ ಕನಸಿನಂತೆ, ರೈತರ ಆರ್ಥಿಕ ಶಕ್ತಿ ದ್ವಿಗುಣಗೊಳಿಸುವ ಹಾದಿಯಲ್ಲಿ ಮುಂದುವರಿದಿದೆ. ಸುಳ್ಯ-ಪುತ್ತೂರು-ಕಡಬ-ಬಂಟ್ವಾಳ-ಬೆಳ್ತಂಗಡಿ-ಮಂಗಳೂರಿನಲ್ಲಿ ಜನರೇ ರೂಪಿಸಿಕೊಂಡ ಉದ್ಯೋಗ ನೈಪುಣ್ಯ(ಕೌಶಲ್ಯ) ತರಬೇತಿಗಳು ಜಿಲ್ಲೆಯ ಜನಜೀವನಕ್ಕೆ ಶಕ್ತಿ ತುಂಬಿದೆ" ಎಂದು ಹೇಳಿದರು.
"ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಜಿಲ್ಲೆಯ 12,56,827 ಜನರಿಗೆ ಉಚಿತ ಲಸಿಕೆ ನೀಡಲಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಯೊಂದಿಗೆ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಿ-ಆಕ್ಸಿಜನ್ ಪೂರೈಕೆಯೊಂದಿಗೆ-ಜನೌಷಧಿ ಕೇಂದ್ರಗಳ ಮೂಲಕ ಜನತೆಯ ಆರೋಗ್ಯಕ್ಕೆ ಪ್ರಥಮ ಆದ್ಯತೆಯನ್ನು ಕೊಡಲಾಗಿದೆ. 23.5ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಮೆಡಿಸಿನ್ ಬ್ಲಾಕ್, 35.2ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಲ್ ಸರ್ಜಿಕಲ್ ಬ್ಲಾಕ್, 3.9ಕೋಟಿ ವೆಚ್ಚದಲ್ಲಿ ಐ.ಸಿ.ಯು ಬೆಡ್-ಮಕ್ಕಳಿಗಾಗಿ ಸ್ಪೆಷಲ್ ಬ್ಲಾಕ್, 132 ವೆಂಟಿಲೇಟರ್, 500 ಬೆಡ್ನ ಸೆಂಟರ್ ಆಕ್ಸಿಜನ್ ವ್ಯವಸ್ಥೆ, ಇತ್ಯಾದಿ ಸೇವೆಗಳು ಸಿದ್ಧವಾಗಿದೆ" ಎಂದರು.
"ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸರಕಾರ ಕಾಲಕಾಲಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಾನವ ಜೀವಹಾನಿ, ಜಾನುವಾರು, ಮನೆ, ಕೃಷಿಹಾನಿಗಳಿಗೆ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗಿದೆ. ಪ್ರವಾಹ ಹಾನಿಗೊಳಗಾದ ರಸ್ತೆ, ಶಾಲೆ, ಸೇತುವೆ ಇತ್ಯಾದಿ 1,659ಲಕ್ಷ ರೂ. ಅನುದಾನದಲ್ಲಿ 584 ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ 65 ಕಾಲುಸಂಕ, 10 ಮೀನು ಮಾರುಕಟ್ಟೆ, 12 ತಡೆಗೋಡೆ, 3 ಥೀಮ್ ಪಾರ್ಕ್, 13 ಸಮುದಾಯ ಭವನ ನಿರ್ಮಾಣವಾಗಿದೆ" ಎಂದರು.
"ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ ಐದು ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಆತ್ಮನಿರ್ಭರ್ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಲ್ಲಿ ವಲಸೆ ಕಾರ್ಮಿಕರಿಗೆ 10 ಕೆಜಿ ಅಕ್ಕಿ ಹಾಗೂ ಕಡಳೆಕಾಳು ನೀಡಲಾಗಿದೆ. ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಪ್ಲಾಸ್ಟಿಕ್ ಪಾರ್ಕ್ ಕೆಲಸ ಪ್ರಗತಿಯಲ್ಲಿದೆ" ಎಂದು ಹೇಳಿದರು.
"ಸಾಂಸ್ಕೃತಿಕವಾಗಿ, ಜಿಲ್ಲಾ ರಂಗಮಂದಿರ, ತುಳು ಭವನ, ಬ್ಯಾರಿ ಭಾವನ, ಕೊಂಕಣಿ ಭವನ ಮತ್ತು ಸಾಂಸ್ಕೃತಿಕ ಭವನಗಳನ್ನು ನಿರ್ಮಾಣಗೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಿದ್ಯಾರ್ಥಿನಿಲಯಗಳಿಗಾಗಿ ಸುಮಾರು 23 ಲಕ್ಷ ರೂ.ವೆಚ್ಚ ಮಾಡಲಾಗಿದೆ. 73.37ಲಕ್ಷ ರೂ. ವಿದ್ಯಾರ್ಥಿ ವೇತನ ಒದಗಿಸಲಾಗಿದೆ.
ಜಿಲ್ಲೆಯ 8 ಸರಕಾರಿ ಕಾಲೇಜುಗಳಿಗೆ 7 ಕೋಟಿ 35 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಪ್ರಾರಂಭವಾಗಿದೆ" ಎಂದರು."ಪ್ರತೀ ಲೀಟರ್ ಡೀಸೆಲ್ಗೆ 9ರೂ. ನಂತೆ 39,590 ಲೀಟರ್, 1,022 ಫಲಾನುಭವಿಗಳಿಗೆ ನೀಡಲಾಗಿದೆ. ಕಾರ್ಮಿಕ ಇಲಾಖೆ, ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಕಪ್ಪು ನೀರು ನಿರ್ವಹಣೆ, ಸಣ್ಣ ನೀರಾವರಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದರು.
"ಶತಶತಮಾನಗಳ ಹಿಂದೆ ಮೆಕಾಲೆ ಮುಂತಾದ ಅನೇಕ ವಿಚಾರಗಳಿಂದ ಮಂಕು ಕವಿದ ಭಾರತಕ್ಕೆ 1947ರ ಆಗಸ್ಟ್-15ರ ಸ್ವಾತಂತ್ರ್ಯ ಸೂರ್ಯನೊಂದಿಗೆ ಮತ್ತೆ ಬೆಳಕು ಬಂದಿದೆ. ಪ್ರತಿಯೊಬ್ಬ ದೇಶವಾಸಿಯು ಯೋಚಿಸಬೇಕು. ಮಹಾಪುರುಷ ಬುದ್ದನ ನುಡಿಗಳಂತೆ ಕೇವಲ ನನ್ನ ಪ್ರಮಾಣದಿಂದ ಯಾವುದನ್ನೂ ಒಪ್ಪಬೇಡ, ವಿಚಾರವಂತನಾಗು, ನಿನಗೆ ನೀನೆ ಬೆಳಕಾಗು ಅದರಂತೆ ನಾವೆಲ್ಲರೂ ಸ್ವಾವಲಂಭಿಗಳಾಗಿ, ಸ್ವಾಭಿಮಾನಿಗಳಾಗಿ ಆತ್ಮ ನಿರ್ಭರ ಭಾರತದೆಡೆಗೆ ಹೆಜ್ಜೆ ಇಡೋಣ" ಎಂದರು.
"ಕೊನೆಯದಾಗಿ ಮತ್ತೊಮ್ಮೆ ಜಿಲ್ಲೆ ಮಹಾಜನತೆಯಲ್ಲಿ ನನ್ನ ನಿವೇದನೆ, ಕೊರೋನ ಮಹಾಮಾರಿಯ ೩ನೇ ಅಲೆ ಎದುರಿಸಲು ಸಿದ್ಧರಾಗೋಣ. ದುಡುಕು, ಉದಾಸಿನ ಬಿಟ್ಟು ಎಚ್ಚೆತ್ತುಕೊಂಡು ತಜ್ಞರು ತಿಳಿಸಿದಂತೆ ಸರಕಾರ ನಿಗದಿಪಡಿಸಿದ ನಿಯಮದಂತೆ ನಡೆದುಕೊಳ್ಳೋಣ. ಇಂತಹ ಕಷ್ಠಕಾಲದಲ್ಲಿ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಮನೆಗಳಲ್ಲಿ ಒಳ್ಳೆಯ ಶಿಕ್ಷಣ, ಸಂಸ್ಕಾರ ಸಿಗುವಂತೆ ಪ್ರಯತ್ನಿಸೋಣ" ಎಂದರು.
ಈ ವೇಳೆ, ಶಾಸಕ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟಿಸ್ ಲಿಮಿಟೆಡ್ನ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ರಾಜ್ಯ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ನಿತೀನ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಐಜಿಪಿ ದೇವಜ್ಯೋತಿ ರೇ, ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಗಣ್ಯರು, ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.