ಉಡುಪಿ, ಆ.14 (DaijiworldNews/HR): ಫೆಗಾಸಸ್ ಸೈಬರ್ ಬೇಹುಗಾರಿಕೆ ಹಗರಣದ ಬಗ್ಗೆ ಲೋಕ ಸಭೆಯಲ್ಲಿ ಪ್ರತಿಪಕ್ಷಗಳಿಗೆ ಚರ್ಚಿಸಲು ಅವಕಾಶ ನೀಡದಿರುವುದು ಆಳುವ ಸರಕಾರದ ಪ್ರಜಾತಂತ್ರ ವಿರೋಧಿ ದೋರಣೆಯ ಪ್ರತೀಕವಾಗಿದ್ದು, ದೇಶ ಸರ್ವಾಧಿಕಾರದ ಕಡೆ ಹೆಜ್ಜೆ ಹಾಕುತ್ತಿದೆಯೇ ಎಂಬ ಭಯ ದೇಶವಾಸಿಗಳನ್ನು ಕಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಭಾರತ ಸರಕಾರ ಸೈಬರ್ ಶಸ್ತ್ರಾಸ್ತ್ರ ತಯಾರಿಯಲ್ಲಿ ಪರಿಣಿತಿ ಹೊಂದಿದ ಇಸ್ರೇಲಿನ ಎನ್ಎಸ್ಒ ಕಂಪೆನಿಯಿಂದ ಪೆಗಾಸಸ್ ಬೇಹುಗಾರಿಕಾ ಸಾಫ್ಟವೇರ್ ಖರೀದಿಸಿ ಕಳೆದ 3ವರ್ಷಗಳಿಂದ ತನ್ನ ದೇಶದ ಸಾಮಾಜಿಕ ಹೋರಾಟಗಾರರು, ಬುದ್ದಿಜೀವಿ ಚಿಂತಕರು, ಪತ್ರಕರ್ತರು, ಹಾಗೂ ನ್ಯಾಯಾಂಗ ಶಾಸಕಾಂಗದ ಪ್ರಮುಖರೂ ಸೇರಿ 300 ಜನರ ಮೊಬೈಲ್ ಸಂಖ್ಯೆ ಹೇಕ್ ಮಾಡಿ ಅವರ ಚಲನವಲನಗಳ ಬಗ್ಗೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಇಮ್ನೇಸ್ಟೀ ಇಂಟರ್ನ್ಯಾಷನಲ್ ಸಂಸ್ಥೆ ಹೇಳಿದೆ. ಆದಾಗ್ಯೂ ಇಮ್ನೇಸ್ಟೀ ಇಂಟರ್ನ್ಯಾಷನಲ್ ಹೇಳಿಕೆಯ ಯತಾರ್ಥತೆಯ ಬಗ್ಗೆ ಚಕಾರವೆತ್ತದ ಕೇಂದ ಸರಕಾರ, ಇಸ್ರೇಲಿನ ಎನ್ ಎಸ್ ಓ ಸಂಸ್ಥೆಗೂ ನಮಗೂ ಯಾವುದೇ ವ್ಯಾವಹಾರೀಕ ಸಂಬಂದ ಇಲ್ಲ ಎಂಬ ಹಾರಿಕೆಯ ಉತ್ತರ ನೀಡಿ ಕೈ ತೊಳೆದು ಕೊಂಡಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.
ದೇಶದ ಬಾಹ್ಯ ಹಾಗೂ ಆಂತರಿಕ ಭದ್ರತೆಯ ಹಿತದೃಷ್ಠಿಯಿಂದ ಪ್ರತೀ ಸರಕಾರಗಳೂ ತಮ್ಮದೇ ಆದ ಶಾಸನಾನುಮತಿಯ ಗುಪ್ತಚರ ವ್ಯವಸ್ಥೆಯನ್ನು ಹೊಂದಿರುವುದು ಹೊಸತಲ್ಲ. ಆದರೆ ಅನ್ಯ ದೇಶವೊಂದರ ಸೈಬರ್ ತಂತ್ರಾಂಶವನ್ನು ಹಣಕೊಟ್ಟು ಖರೀದಿಸಿ, ತನ್ನ ಸರಕಾರವನ್ನು ರಕ್ಷಿಸಿಕೊಳ್ಳಲು, ತನ್ನ ಸರಕಾರದ ಅಪಸವ್ಯಗಳ ಬಗ್ಗೆ ಮಾತೆತ್ತುವ, ಪ್ರಜಾತಂತ್ರದ ಬಗ್ಗೆ ಮಾತನಾಡುವ ತನ್ನದ್ದೇ ಜನರ ಮೊಬೈಲ್ ನಂಬರ್ ಹೇಕ್ ಮಾಡಿ ಬೇಹುಗಾರಿಕೆ ನಡೆಸುವ ಔಚಿತ್ಯವಾದರೂ ಏನು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಬಗ್ಗೆ ದೇಶವಾಸಿಗಳ ಸಂಶಯ ನಿವಾರಣೆ ಮಾಡುವುದು ಮಾನ್ಯ ಪ್ರಧಾನಿ ಮೋದಿ ಸರಕಾರದ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.