ಮಂಗಳೂರು, ಆ 14 (DaijiworldNews/MS): ಎನ್ ಐಎ ತನಿಖೆ ಕುರಿತು ಗೊಂದಲದ ಹೇಳಿಕೆ ಬೇಡ ಎಂಬ ಮಾಜಿ ಸಚಿವ ಯುಟಿ ಖಾದರ್ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಉಳ್ಳಾಲ ಪಾಕ್ ನಲ್ಲಿ ಇಲ್ಲ ಅದು ನಮ್ಮಲ್ಲೇ ಇದೆ ಎಂದು ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಟಾಂಗ್ ಮಾಜಿ ಸಚಿವರಿಗೆ ನೀಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಮನೆಯಲ್ಲಿ ನಡೆದಂತಹ ಲವ್ ಜಿಹಾದ್ ಹಾಗೂ ಉಗ್ರರ ಜೊತೆಗಿನ ಸಂಬಂಧದ ವಿಚಾರವನ್ನ ಖಂಡಿಸಿ ಇತ್ತೀಚೆಗೆ ವಿಎಚ್ ಪಿ ಪ್ರತಿಭಟನೆಯನ್ನು ನಡೆಸಿತ್ತು. ಇದಿನಬ್ಬರ ಮನೆಯಲ್ಲಿ ನಡೆದಂತಹ ಮತಾಂತರದ ವಿಚಾರವನ್ನು ಕೇಳಲು ನೀವು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಲವ್ ಜಿಹಾದ್, ಮತಾಂತರ, ಉಗ್ರ ಕೃತ್ಯ ನಡೆದರೂ ನಾವು ಅದನ್ನು ಪ್ರಶ್ನೆ ಮಾಡಿಯೇ ಮಾಡುತ್ತೇವೆ. ಅದನ್ನ ಕೇಳೋಕೆ ನೀವ್ಯಾರು ಅಂತ ಯುಟಿ ಖಾದರ್ ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸವಾಲ್ ಎಸೆದರು.
ಮೊನ್ನೆ ವಿಎಚ್ ಪಿ ಮಾಡಿದ ಪ್ರತಿಭಟನೆಯನ್ನು ಬಿಜೆಪಿ ಸಮರ್ಥಿಸುತ್ತದೆ. ಇದು ನಿನ್ನೆ, ಇಂದಿನ ಹೋರಾಟವಲ್ಲ. ಕಳೆದ ಏಳು ದಶಕಗಳಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ ಇದೆಲ್ಲದರ ವಿರುದ್ಧ ಹೋರಾಟ ಮಾಡುತ್ತಲೇ ಬರಲಾಗಿದೆ. ಯುಟಿ ಖಾದರ್ ಅವರು ಬಾಲಿಶವಾದ ಹೇಳಿಕೆಯನ್ನು ನೀಡಿದ್ದಾರೆ. ಇದಿನಬ್ಬರ ಮೊಮ್ಮಗಳು ಮತ್ತು ಅವಳ ಗಂಡ ಐಸಿಸಿಗೆ ಸೇರಿದ್ದು ದಾಖಲೆ ಮೂಲಕ ಸಾಬೀತಾಗಿದೆ. ಇದಿನಬ್ಬರ ಕುಟುಂಬಕ್ಕೆ ಭಯೋತ್ಪಾದಕರ ನಂಟಿದೆ, ಲವ್ ಜಿಹಾದ್ ನಂಟಿದೆ ಎಂಬುದು ಸಾಬೀತಾಗಿದೆ. ನಮ್ಮ ಕ್ಷೇತ್ರ ಉಳ್ಳಾಲದಲ್ಲಿ ಹೊರಗಿನವರು ಬಂದು ಪ್ರತಿಭಟನೆ ಮಾಡಿದ್ದಾರೆ ಅಂತ ಯುಟಿ ಖಾದರ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉಳ್ಳಾಲ ಪಾಕಿಸ್ತಾನದಲ್ಲಿಲ್ಲ. ಅದು ನಮ್ಮಲ್ಲೇ ಇದೆ ಅಂತ ಪ್ರತಿಕ್ರಿಯೆ ನೀಡಿದರು.