ಮಂಗಳೂರು ಆ 13 (DaijiworldNews/MS): ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ.ಇದಿನಬ್ಬ ಅವರ ಮನೆ ಮೇಲೆ ನಡೆದಿದ್ದ ಎನ್ಐಎ ದಾಳಿ ಬಳಿಕ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮುತ್ತಿಗೆ ನಡೆಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಯು. ಟಿ. ಖಾದರ್ ಹಿಂದೂ ಪರ ಸಂಘಟನೆಗಳ ನಡೆಯನ್ನು ಖಂಡಿಸಿದ್ದಾರೆ.
ಇದ್ದಿನಬ್ಬರ ಮೊಮ್ಮಗ ಮಡಿಕೇರಿ ಮೂಲದ ಬಂಟ ಸಮುದಾಯದ ಯುವತಿ ಮರಿಯಮ್ ಆಲಿಯಾಸ್ ದೀಪ್ತಿ ಮಾರ್ಲ ಎಂಬಾಕೆಯನ್ನು ಲವ್ ಜಿಹಾದ್ ನಡೆಸಿ ವಿವಾಹ ಮಾಡಲಾಗಿದೆ. ದೀಪ್ತಿ ಮಾರ್ಲ ಸೇರಿ ಇಡೀ ಕುಟುಂಬದ ವಿರುದ್ಧ ತನಿಖೆ ನಡೆಸಬೇಕು ಎಂದು ವಿಎಚ್ ಪಿ ಆಗ್ರಹಿಸಿತ್ತು. ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು. ಟಿ. ಖಾದರ್ ಆ ಮನೆಯ ಯುವತಿಯ ಬಗ್ಗೆ ಕೇಳೋಕೆ ಈ ಸಂಘಟನೆಯವರು ಯಾರು? ಅವರ ತಂದೆ ತಾಯಿ ಬಂದು ಏನಾದ್ರೂ ಪೊಲೀಸರಿಗೆ ದೂರು ನೀಡಿದ್ದಾರೆಯೇ? ಇದು ಅವರ ಮನೆಯವರಿಗೆ ಬಿಟ್ಟ ವಿಚಾರ. ನನ್ನ ಉಳ್ಳಾಲ ಕ್ಷೇತ್ರಕ್ಕೆ ಬಂದು , ಹೊರಗಿನಿಂದ ಬಂದು ಲವ್ ಜಿಹಾದ್ ಎನ್ನುವ ಅಜೆಂಡಾ ಇಟ್ಟು ಪ್ರತಿಭಟನೆ ಮಾಡುತ್ತೀರಿ ನಿಮಗೆ ಸಾಧ್ಯವಾದರೆ ಲವ್ ಜಿಹಾದ್ ವಿರುದ್ದ ಕಾನೂನು ತರಲು ಉಪವಾಸ ಮಾಡಿ ಎಂದು ಸವಾಲೆಸಿದ್ದಾರೆ.
ಇವತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿಲ್ಲ. ಇಲ್ಲಿನ ಜನರು ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕುತ್ತಿದ್ದಾರೆ. ಎನ್ ಐ ಎ ತನಿಖೆ ನಡೆಯುವಾಗ ಹೇಳಿಕೆ ನೀಡುವುದು ಸರಿಯಲ್ಲ. ಎನ್ ಐಎ ಬಂದಿರೋದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಈ ಬಗ್ಗೆ ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು.