ಉಡುಪಿ, ಆ 13 (DaijiworldNews/PY): "ನಾನು ಮರಣ ಹೊಂದಿದ ಬಳಿಕ ನನ್ನ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ನೀವು ಸಹಿ ಹಾಕಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದಲ್ಲಿ ಇಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದು ವಿಶ್ವ ಅಂಗಾಂಗ ದಾನ ದಿನ. ಈ ದಿನ ನಾನು ಕೂಡಾ ಅಂಗಾಂಗ ದಾನ ಪತ್ರಕ್ಕೆ ಸಹಿ ಹಾಕುತ್ತೇನೆ. ಅಂಗಾಂಗ ದಾನದಿಂದ ಬಹಳಷ್ಟು ಜೀವಗಳನ್ನು ರಕ್ಷಿಸಬಹುದಾಗಿದೆ. ಎಲ್ಲರೂ ಅಂಗಾಂಗ ದಾನದ ಸಂಕಲ್ಪ ಮಾಡಬೆಕು ಎಂದು ಕರೆ ನೀಡುತ್ತೇನೆ" ಎಂದಿದ್ದಾರೆ.
"ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಾಂಗ ದಾನಕ್ಕೆ ಮುಂದೆ ಬಂದಲ್ಲಿ, ನಮ್ಮ ಮರಣದ ಬಳಿಕವೂ ಸಾವಿರಾರು ಜೀವಗಳನ್ನು ಉಳಿಸಬಹುದು. ಜೀವ ಉಳಿಸುವ ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಮುಂದೆ ಬರಬೇಕು. ಅಂಗಾಂಗ ದಾನ ಮಾಡುವ ಮುಖೇನ ಮಣ್ಣಲ್ಲಿ ಮಣ್ಣಾಗುವ ಅಂಗಾಂಗಳು ಉಪಯೋಗವಾಗಿ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಏಕೆ ಹೀಗೆ ಮಾಡಬಾರದು? ಕುಟುಂಬದವರ ಮನವೊಲಿಸಿ. ಜೀವ ಹೋದ ಬಳಿಕ ಇನ್ನೊಂದು ಜೀವ ಉಳಿಸಿ" ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, "ಜೀವವನ್ನು ಉಳಿಸಿ, ಹೊಸ ಜೀವನ ಕಟ್ಟಿ ಕೊಡುವ ಅಂಗಾಂಗ ದಾನದ ಮಹತ್ವ ಮತ್ತು ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲರೂ ಪ್ರಯತ್ನಿಸೋಣ. ಈ ವಿಶ್ವ ಅಂಗಾಂಗ ದಾನ ದಿನದಂದು, ಅಂಗಾಂಗ ದಾನದ ಬಗ್ಗೆ ಇರುವ ಸಂಶಯಗಳನ್ನು, ಹಿಂಜರಿಕೆಯನ್ನು ನಿವಾರಿಸುವ ದೃಢ ಸಂಕಲ್ಪ ತಾಳೋಣ" ಎಂದಿದ್ದಾರೆ.
ಈ ವೇಳೆ ಶಾಲಾರಂಭದ ಬಗ್ಗೆ ಮಾಹಿತಿ ನೀಡಿರುವ ಅವರು, "ಶಾಲಾರಂಭದ ಬಗ್ಗೆ ಇಂದು ತಜ್ಞರ ತುರ್ತು ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
"ತಜ್ಞರ ವರದಿಯ ಆಧಾರದ ಮೇಲೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಮತ್ತೊಮ್ಮೆ ತಜ್ಞರ ಸಭೆ ಕರೆದು, ಅವರ ಅಭಿಪ್ರಾಯಗಳನ್ನು ಪಡೆದು ಶಾಲಾರಂಭದ ಕುರಿತು ನಿರ್ಧರಿಸಲಾಗುವುದು" ಎಂದಿದ್ದಾರೆ.