ಬೆಳ್ಮಣ್, ಆ. 12 (DaijiworldNews/SM): ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬೆಳ್ಮಣ್ ನಲ್ಲಿ ಗುರುವಾರ ನಡೆದಿದೆ.
ಪಶ್ಚಿಮ ಬಂಗಾಳ ರಾಜ್ಯದ ಪ್ರಹ್ಲಾದ್ ಸರಕಾರ್(23) ಎಂಬಾತ ಮೃತ ದುರ್ದೈವಿ. ಎಡ್ವರ್ಡ್ ಮಿಸ್ಕಿತ್ ಎಂಬವರ ಮಾಲಕತ್ವದಲ್ಲಿ ಚೌಡಪ್ಪ ಗಚ್ಚಣ್ಣನವರ್ ಎಂಬಾತ ಗುತ್ತಿಗೆ ಪಡೆದಿರುವ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ.
ನಿರ್ಮಾಣ ಹಂತದಲ್ಲಿ ಇದ್ದ ಕಟ್ಟಡದಲ್ಲಿಯೇ ಕೆಲಸ ಮಾಡುವ ಕೆಲಸಗಾರರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದು, ಪ್ರಹ್ಲಾದ್ ಸರಕಾರ್ ಕಟ್ಟಡದಲ್ಲಿಯೇ ಉಳಕೊಂಡಿದ್ದ. ಯಾವುದೇ ರಕ್ಷಣಾ ವ್ಯವಸ್ಥೆ ಮಾಡದ ಕಾರಣ ಆತನು ವಾಸ ಮಾಡಿಕೊಂಡಿದ್ದ ನಿರ್ಮಾಣ ಹಂತದ ಕಟ್ಟಡದ ಮೊದಲನೆಯ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.