ಮಂಗಳೂರು,ಆ 12 (DaijiworldNews/MS): ಕೊರೊನಾ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಹಾವೇರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೈಗೊಂಡಿರುವ ‘ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಸನ್ ವಿಭಾಗದಲ್ಲಿ 32 ಬೆಡ್ ಸೌಲಭ್ಯವುಳ್ಳ ಐಸಿಯು ಘಟಕವನ್ನು ಉದ್ಘಾಟಿಸಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕೊರೊನಾ ದಿಂದ ಮುಂದೆ ಎಂತಹ ಪರಿಸ್ಥಿತಿ ಬಂದರೂ ಸನ್ನದ್ದ ಆಗಿರಬೇಕು ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಮುಖಾಂತರ ನಮ್ಮ ವೈದ್ಯಕೀಯ ಸವಲತ್ತುಗಳನ್ನು ಬಲಿಷ್ಟಗೊಳಿಸುವ ಕೆಲಸಕ್ಕೆ ಇನ್ನಷ್ಟೂ ವೇಗ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ . ಮೂರನೇ ಅಲೆಯಲ್ಲಿ ಲಸಿಕೆ ಪಡೆಯದೇ ಇರುವ ಗುಂಪಾದ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಇರುವ ಹೆಚ್ಚಿರುವ ಕಾರಣ ಮುಂದೆ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು, ಮಕ್ಕಳ ಇಮ್ಯೂನಿಟಿ ಸಿಸ್ಟಂ ಸದೃಢವಾಗಿರಬೇಕು ಎಂದು ವಾತ್ಯಲ ಯೋಜನೆ ಮೂಲಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ, ಪೌಷ್ಟಿಕ ಆಹಾರದ ಕೊರತೆಯ ತಪಾಸಣೆ, ಮಕ್ಕಳ ಬೆಳವಣಿಗೆಗಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಇದಲ್ಲದೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿಯೂ ಹಾಗೂ 100 ಕ್ಕೂ ಹೆಚ್ಚು ಬೆಡ್ ಇರುವ ತಾಲೂಕು ಆಸ್ಪತ್ರೆಗಳಲ್ಲಿ "ಪಿಡಿಯಾಟ್ರಿಕ್ ಐಸಿಯೂ ಬೆಡ್ " (ಪಿಐಸಿಯು )ಗಳ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಮುಂದುವರಿಸಿ ಮಾತನಾಡಿದ ಅವರು ಕೊವೀಡ್ ನ ಸ್ಥಿತಿಗತಿ , ನಿರ್ವಹಣೆ ಬಗ್ಗೆ ಸಂಪೂರ್ಣ ಪರಿಶೀಲನೆ ಮಾಡುವ ಉದ್ದೇಶದಿಂದ ಸಿಎಂ ಆದ ಬಳಿಕ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ್ದೇನೆ. ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಕೊವೀಡ್ ನ್ನು ಸಂಪೂರ್ಣ ನಿಯಂತ್ರಣ ಮಾಡಬೇಕು ಎನ್ನುವ ಉದ್ದೇಶ ಸರ್ಕಾರಕ್ಕಿದೆ. ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಅಗತತ್ಯೆಯನ್ನು ಕಂಡುಕೊಂಡಿದ್ದೇವೆ. ಕೊವೀಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ನಮಗೆ ಅನುಭವ ಇದ್ದು ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಸೋಂಕು ನಮ್ಮ ರಾಜ್ಯಕ್ಕೂ ವ್ಯಾಪಿಸಿತ್ತು. ಆ ಹಿನ್ನಲೆಯಲ್ಲಿ ನಾನು ಅಧಿಕಾರ ವಹಿಸಿಕೊಂಡ ತಕ್ಷಣ ತಜ್ಞರೊಂದಿಗೆ ಮಾತನಾಡಿ ಅವರ ಸಲಹೆಯಂತೆ ಗಡಿ ಭಾಗದ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ , ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶ ಮುಂತಾದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ಶಾಲಾರಂಭದ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ, ಆ. 23 ರಿಂದ ೯,೧೦ ೧೧ , ಪರ್ಯಾಯ ದಿನಗಳಂತೆ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.