ಕಾಸರಗೋಡು, ಆ.11 (DaijiworldNews/HR): ರಾಜ್ಯದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಆರಂಭಿಸಲಾದ ಆರ್ಟಿಪಿಸಿಆರ್ ತಪಾಸಣೆಯಲ್ಲಿ ಶೇಕಡಾ ಒಂದಕ್ಕಿಂತಲೂ ಕಡಿಮೆ ಪಾಸಿಟಿವಿಟಿ ರೇಟ್ ಕಂಡು ಬಂದಿದೆ. ಗಡಿ ಪ್ರದೇಶದ ಗ್ರಾಮ ಪಂಚಾಯತ್ ಕೇಂದ್ರೀಕರಿಸಿ ತಪಾಸಣೆ ನಡೆಸಲಾಗುತ್ತಿದ್ದು, ಸೋಂಕಿತರ ಪ್ರಮಾಣ ಗಣನೀಯ ಇಳಿಕೆ ಕಂಡಿದೆ ಎಂದು ತಪಾಸಣಾ ವರದಿಯಿಂದ ತಿಳಿದುಬಂದಿದೆ.
ಕೇರಳದಿಂದ ಕರ್ನಾಟಕಕ್ಕೆ ತೆರಳಲು ಆರ್ಟಿಪಿಸಿಆರ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿದ ಹಿನ್ನಲೆಯಲ್ಲಿ ಗಡಿ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕಾಸರಗೋಡು ಜಿಲ್ಲಾಡಳಿತ ತಲಪಾಡಿಯಲ್ಲಿ ತಪಾಸಣಾ ಕೇಂದ್ರ ತೆರೆದಿದೆ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಸ್ಪೈಸ್ ಹೆಲ್ತ್ ಸಂಸ್ಥೆ ಆರ್ಟಿಪಿಸಿಆರ್ ತಪಾಸಣೆ ನಡೆಸುತ್ತಿದೆ. ತಲಪ್ಪಾಡಿಯ ವಿಶ್ವಾಸ್ ಸಭಾಂಗಣದಲ್ಲಿ ಕೇಂದ್ರ ತೆರೆಯಲಾಗಿದ್ದು, ಪ್ರತಿದಿನ 350 ಮಂದಿಯ ತಪಾಸಣೆ ನಡೆಸಲಾಗುತ್ತಿದೆ. ಆದರೆ ಬೆರಳಣಿಕೆಯಷ್ಟು ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ.
ಆಸ್ಪತ್ರೆ, ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ವ್ಯವಹಾರಗಳಿಗೆ ಮಂಗಳೂರನ್ನು ಆಶ್ರಯಿಸಿಕೊಂಡಿರುವ ಗಡಿ ಪ್ರದೇಶದ ಸಾವಿರಾರು ಮಂದಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಿದ್ದು
ಕಳೆದ ಒಂದು ವಾರದ ಟೆಸ್ಟ್ ಪಾಸಿಟಿವಿಟಿ ರೇಟ್ ಶೇಕಡಾ 0.847 ಆಗಿದ್ದು, 2006 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, 17 ಮಂದಿಯಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ.
ಆಗಸ್ಟ್ 3 ರಂದು 303 ಮಂದಿಯಲ್ಲಿ ಇಬ್ಬರು , ನಾಲ್ಕರಂದು 352 ಮಂದಿಯಲ್ಲಿ 4, 5 ರಂದು 323 ಮಂದಿಯಲ್ಲಿ 3, 6 ರಂದು 275 ಮಂದಿಯಲ್ಲಿ 2 ,7 ರಂದು 247 ಮಂದಿಯಲ್ಲಿ 2, ಆಗಸ್ಟ್ 8 ರಂದು 193 ಮಂದಿಯಲ್ಲಿ 2 ಹಾಗೂ 9 ರಂದು 313 ಮಂದಿಯಲ್ಲಿ ಮೂವರಲ್ಲಿ ಮಾತ್ರ ಪಾಸಿಟಿವ್ ಪತ್ತೆಯಾಗಿದೆ. ಒಂದೆಡೆ ಗಡಿಯಲ್ಲಿ ಆರಂಭಿಸಲಾದ ತಪಾಸಣಾ ಕೇಂದ್ರದಿಂದ ಗಡಿಪ್ರದೇಶದ ಜನತೆಗೆ ವರದಾನ ವಾದರೆ ಸೋಂಕಿತರ ಪ್ರಮಾಣ ಬೆರಳಣಿಕೆಗೆ ಇಳಿದಿರುವುದು ನೆಮ್ಮದಿ ತಂದಿದೆ.