ಕಾಸರಗೋಡು,ಆ 11 (DaijiworldNews/MS): ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಟಿ . ಕೆ ಪೂಕೋಯ ತಂಘಳ್ ಆ. 11ರ ಬುಧವಾರ ಮಧ್ಯಾಹ್ನ ಹೊಸದುರ್ಗ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಈತ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದು , ಕಳೆದ ನವಂಬರ್’ನಿಂದ ತಲೆ ಮರೆಸಿಕೊಂಡಿದ್ದನು. ಒಂಭತ್ತು ತಿಂಗಳ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದಾನೆ . ಪೊಲೀಸರು ಈತನಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಪೂಕೋಯ ತಂಘಳ್’ನ ಪುತ್ರ ಹಾಶಿಂ ಇನ್ನೂ ತಲೆಮರೆಸಿಕೊಂಡಿದ್ದಾನೆ .
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಂಜೇಶ್ವರ ಮಾಜಿ ಶಾಸಕ ಎಂ . ಸಿ ಕಮರುದ್ದೀನ್ ನನ್ನು ಈ ಹಿಂದೆ ಬಂಧಿಸಲಾಗಿತ್ತು. ಕಮರುದ್ದೀನ್ ೯೩ ದಿನಗಳ ಜೈಲು ವಾಸದ ಬಳಿಕ ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದರು.
ಕಮರುದ್ದೀನ್ ನನ್ನು ಬಂಧಿಸಿದ ಬೆನ್ನಿಗೆ ಪೂಕೋಯ ತಂಘಳ್ ತಲೆ ಮರೆಸಿಕೊಂಡಿದ್ದನು. ಇನ್ನೋರ್ವ ಆರೋಪಿ ಜೈನುಲ್ ಅಬೀದ್ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಜರಾಗಿದ್ದನು, ಕಮರುದ್ದೀನ್ ಫ್ಯಾಶನ್ ಗೋಲ್ಡ್ ಜುವೆಲ್ಲರಿಯ ಅಧ್ಯಕ್ಷನಾಗಿದ್ದು ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ಹುಟ್ಟು ಹಾಕಿ ಸುಮಾರು 749 ಮಂದಿಯಿಂದ ಠೇವಣಿ ಪಡೆದು ವಂಚನೆ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು. ವಂಚನೆ ವಿರುದ್ದ 148 ಕ್ಕೂ ಪ್ರಕರಣಗಳು ಈಗಾಗಲೇ ದಾಖಲಾಗಿವೆ . ಕ್ರೈಂ ಬ್ರಾಂಚ್ ಪ್ರಕರಣದ ತನಿಖೆ ನಡೆಸುತ್ತಿದೆ.