ಉಳ್ಳಾಲ, ಆ 11 (DaijiworldNews/MS): ಕಳೆದ ವರ್ಷ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಬಾಲಿವುಡ್ ನಟ ಸೋನುಸೂದ್ ಅನೇಕ ಮಂದಿಗೆ ಸಹಾಯ ಮಾಡಿದ್ದರು. ಇದೀಗ ಕೊರೊನಾ ಎರಡನೇ ಅಲೆ ಮೂಲಕ ತನ್ನ ಆರ್ಭಟ ಆರಂಭಿಸಿದ್ದು, ಈ ವೇಳೆ ಕೂಡ ಸೋನುಸೂದ್ ಜನರಿಗೆ ಸಹಾಯ ಮಾಡುವ ಕಾರ್ಯವನ್ನು ಮುಂದುವರಿಸಿದ್ದಾರೆ.
ಆಕ್ಸಿಜನ್ ಮತ್ತು ಅಗತ್ಯ ವೈದ್ಯಕೀಯ ನೆರವು ನೀಡುವ ಮೂಲಕ ಗಮನ ಸೆಳೆದ ನಟ ಸೋನುಸೂದ್ ಅವರು ಉಳ್ಳಾಲದ ಜನರಿಗೂ ಸಹಾಯಹಸ್ತ ಚಾಚಿದ್ದಾರೆ.
ಹೌದು ಸೋನು ಸೂದ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ಸುಮಾರು 76.88 ಲಕ್ಷ ರೂ ವೆಚ್ಚದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾಗಿದ್ದು, ಈ ತಿಂಗಳ ಕೊನೆಯಲ್ಲಿ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ.
ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಘಟಕದ ಕುರಿತು ಟ್ವೀಟ್ ಮಾಡಿರುವ ಸೋನು ಸೂದ್ ನಮ್ಮ ಮುಂದಿನ ಆಕ್ಸಿಜನ್ ಘಟಕ ಉಳ್ಳಾಲದಲ್ಲಿ ಸ್ಥಾಪನೆಯಾಗಲಿದ್ದು ಈ ವಾರದಲ್ಲಿ ಘಟಕವನ್ನು ಸ್ಥಾಪನೆ ಮಾಡುವ ಕಾರ್ಯ ನಡೆಯಲಿದೆ ಎಂದಿದ್ದಾರೆ.
ಸೋನು ಸೂದ್ ಚಾರಿಟೇಬಲ್ ಫೌಂಡೇಶನ್ನಿಂದ ಕಳೆದ ಜೂನ್ನಲ್ಲಿ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ರ್ಯಾಪಿಡ್ ಆಕ್ಸಿಜನ್ ಸೆಂಟರ್ ತೆರೆಯುವಾಗ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಫೌಂಡೇಶನ್ನ ಮುಖ್ಯಸ್ಥರೊಂದಿಗೆ ಜಿಲ್ಲೆಯಲ್ಲಿ ಆಮ್ಲಜನಕ ಘಟಕದ ಅಗತ್ಯತೆಯ ಕುರಿತು ಮನವರಿಕೆ ಮಾಡಿದ್ದರು. ಮನವಿಗೆ ಫೌಂಡೇಶನ್ ಸ್ಪಂದಿಸಿದ್ದು ಘಟಕ ನಿರ್ಮಾಣಕ್ಕೆ ಮುಂದಾಗಿದೆ.