ಉಡುಪಿ, ಆ 10 (DaijiworldNews/PY): "ಜಿಲ್ಲೆಯಲ್ಲಿ ಐಸಿಯು ಬೆಡ್ಗಳನ್ನು ಹೆಚ್ಚಳ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು" ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, "ಮೂರನೇ ಅಲೆ ನಿಯಂತ್ರಣಕ್ಕೆ ಈಗಾಗಲೇ ಒಂದು ತಿಂಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಜಿಲ್ಲೆಯಲ್ಲಿ ವಾತ್ಸಲ್ಯ ಕಾರ್ಯಕ್ರಮವನ್ನು, ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದ್ದು, ಸುಮಾರು 2 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೂರನೇ ಅಲೆ ತಡೆಯಬೇಕು ಎನ್ನುವುದು ನಮ್ಮ ಆಶಯ" ಎಂದು ತಿಳಿಸಿದ್ದಾರೆ.
"ಒಂದು ವೇಳೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆ ನಾವು ಮಕ್ಕಳ ತಜ್ಞರ ಸಭೆಯನ್ನು ಮಾಡಿದ್ದು, ಅವರು ಈಗಾಗಲೇ ಸಲಹೆ ನೀಡಿದ್ದಾರೆ. ಈ ಹಿಂದೆ ಎಷ್ಟು ಮಕ್ಕಳಿಗೆ ಸೋಂಕು ತಗುಲಿದೆ, ಮುಂದೆ ಎಷ್ಟು ಮಕ್ಕಳಿಗೆ ಸೋಂಕು ತಗುಲಬಹುದು ಎನ್ನುವ ಮಾಹಿತಿ ನೀಡಿದ್ದಾರೆ. ಮೂರನೇ ಅಲೆಗೆ ಯಾವೆಲ್ಲಾ ಕೊರತೆ ಇದೆ ಎನ್ನುವ ಬಗ್ಗೆ ವಿಶ್ಲೇಷಣೆ ಮಾಡಿದ್ದೇವೆ. ಆ ಕೊರತೆ ನೀಗಿಸುವ ದೃಷ್ಟಿಯಿಂದ ಈಗಾಗಲೇ ಜಿಲ್ಲೆಯಲ್ಲಿ 50 ಐಸಿಯು ಬೆಡ್ಗಳನ್ನು ಹೆಚ್ಚು ಮಾಡಬೇಕು ಎನ್ನುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಿರ್ಮಿತ ಕೇಂದ್ರದವರಿಗೆ ಆದೇಶ ನೀಡಿದ್ದೇವೆ. ಇದನ್ನು ನಾವು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಕಾರ್ಕಳ ಹಾಗೂ ಕುಂದಾಪುರದಲ್ಲಿ ಮಾಡಬೇಕು ಎಂದು ಯೋಜಿಸಿದ್ದೇವೆ. ಈ ಕಾರ್ಯ ನಡೆಯುತ್ತಿದೆ" ಎಂದಿದ್ದಾರೆ.
"ಆಕ್ಸಿಜನ್ ಪ್ಲಾಂಟ್ಗಳು ಈಗಾಗಲೇ ಹೆಬ್ರಿಗೆ ಬಂದಿವೆ. ಕಾರ್ಕಳಕ್ಕೆ ಈಗಾಗಲೇ ಒಂದು ಆಕ್ಸಿಜನ್ ಪ್ಲಾಂಟ್ ಬಂದಿದೆ. ಉಡುಪಿಗೆ ಇನ್ನೆರಡು ದಿನಗಳಲ್ಲಿ ಆಕ್ಸಿಜನ್ ಪ್ಲಾಂಟ್ ಬರಲಿದೆ. ಇನ್ನೊಂದು ವಾರದಲ್ಲಿ ಕುಂದಾಪುರಕ್ಕೆ ಕೂಡಾ ಬರಲಿದೆ. ಹಾಗಾಗಿ ಈ ಹಿಂದೆ ಆಕ್ಸಿಜನ್ಗೆ ಏನು ಕೊರತೆ ಇತ್ತು. ನಮ್ಮ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ಗೆ ಯಾವುದೇ ಕೊರೆತ ಆಗದೇ ಇರುವ ರೀತಿಯಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಪ್ಲಾಂಟ್ ಬರುತ್ತವೆ. ಖಾಸಗಿ ಆಸ್ಪತ್ರೆಗೆ ಈ ಹಿಂದೆ ಇದ್ದ ರೀತಿ ಸಿಲಿಂಡರ್ ಅನ್ನು ನೀಡುತ್ತಿದ್ದೇವೆ" ಎಂದು ಹೇಳಿದ್ದಾರೆ.
"ಪೀಡಿಯಾಟ್ರಿಕ್ ವೆಂಟಿಲೇಟರ್ ಎಷ್ಟು ಬೇಕು ಎಂದು ಪರಿಶೀಲಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಈಗಾಗಲೇ ಪರಿಶೀಲನೆ ಮಾಡಲಾಗಿದ್ದು, ಅದರಂತೆ ಖರೀದಿ ಮಾಡಲು ಕ್ರಮ ವಹಿಸಲಾಗಿದೆ" ಎಂದು ತಿಳಿಸಿದ್ದಾರೆ.