ಕಾಸರಗೋಡು, ಆ 10 (DaijiworldNews/MS): ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ತನಿಖಾ ತಂಡ ಬಂಧಿಸಿದೆ. ಇದರಿಂದ ಬಂಧಿತರಾವರ ಸಂಖ್ಯೆ ಎರಡಕ್ಕೇರಿದೆ.
ಬಂಧಿತನನ್ನು ಕಾರ್ಕಳ ಹೊಸ್ಮಾರಿನ ಮುಹಮ್ಮದ್ ರಿಯಾಜ್ ( 32) ಎಂದು ಗುರುತಿಸಲಾಗಿದೆ. ಕುದ್ರೆಮುಖ ಪರಿಸರದಿಂದ ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ಮಂಜೇಶ್ವರ ಠಾಣಾ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ತಂಡವು ಈತನನ್ನು ಬಂಧಿಸಿದೆ.
ಪ್ರಮುಖ ಆರೋಪಿಯಾದ ತೃಶ್ಯೂರು ಕೊಡಂಗಲ್ಲೂರಿನ ಸತ್ಯೇಶ್ ಕೆ .ಪಿ ಯಾನೆ ಕಿರಣ್ (35) ನನ್ನು ಈ ಹಿಂದೆ ಬಂಧಿಸಲಾಗಿತ್ತು. ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಐದು ಮಂದಿ ಇನ್ನೂ ತಲೆ ಮರೆಸಿಕೊಂಡಿದ್ದು , ಇವರಲ್ಲಿ ಬಹುತೇಕ ಮಂದಿ ಕರ್ನಾಟಕ ನಿವಾಸಿಗಳೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಜುಲೈ 26 ರಂದು ಮುಂಜಾನೆ ದರೋಡೆ ನಡೆದಿತ್ತು.ಏಳು ಮಂದಿಯ ತಂಡವು ಕಾವಲುಗಾರ ಅಬ್ದುಲ್ಲರನ್ನು ಥಳಿಸಿ ಬಳಿಕ ಕಟ್ಟಿ ಹಾಕಿ ಹದಿನೈದು ಕಿಲೋ ಬೆಳ್ಳಿಯ ಆಭರಣ , ನಾಲ್ಕೂವರೆ ಲಕ್ಷ ರೂ . ನಗದು ದರೋಡೆ ಮಾಡಿತ್ತು. ದರೋಡೆಗೆ ಬಳಕೆ ಮಾಡಲಾಗಿದ್ದ ಇನ್ನೋವಾ ಕಾರು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು . ಈ ಕಾರಿನಿಂದ ಏಳು ಕಿಲೋ ಬೆಳ್ಳಿ ಆಭರಣ ಹಾಗೂ ಎರಡು ಲಕ್ಷ ರೂ. ಪತ್ತೆಯಾಗಿತ್ತು. ಉಳಿದ ಆಭರಣ ಹಾಗೂ ನಗದು ಸಹಿತ ದರೋಡೆಕೋರರು ಇನ್ನೊಂದು ಕಾರಿನಲ್ಲಿ ನಾಪತ್ತೆಯಾಗಿದ್ದರು.ತಲೆ ಮರೆಸಿಕೊಂಡಿರುವ ಎಲ್ಲಾ ಆರೋಪಿಗಳ ಮಾಹಿತಿ ಲಭಿಸಿದ್ದು , ಶೀಘ್ರ ಇವರನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.