ಉಪ್ಪಿನಂಗಡಿ, ಆ 10 (DaijiworldNews/PY): ಕಳೆದ ಡಿಸೆಂಬರ್ 21ರಂದು ಕೊಕ್ಕಡದಲ್ಲಿ ನಡೆದ ನೂಜ ತುಕ್ರಪ್ಪ ಶೆಟ್ಟಿ ಅವರ ಮನೆ ದರೋಡೆ ಪ್ರಕರಣದ ಆರೋಪಿಗಳಾದ ಇಬ್ಬರು ಪ್ರಮುಖ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ವಿಶೇಷ ಅಪರಾಧ ಪತ್ತೆ ತಂಡ ಬಂಧಿಸಿದೆ.
ಬಂಧಿತರನ್ನು ನೆಲ್ಯಾಡಿಯ ನಿವಾಸಿ ಚಂದ್ರಶೇಖರ ಶೆಟ್ಟಿ (50) ಹಾಗೂ ಸುರತ್ಕಲ್ ಸೂರಿಂಜೆ ನಿವಾಸಿ ದಾವೂದ್ ಹಕೀಂ (36) ಎಂದು ಗುರುತಿಸಲಾಗಿದೆ.
ನೆಲ್ಯಾಡಿಯ ಹೊಸಮಜಲಿನ ಬಾಡಿಗೆ ಮನೆಯೊಂದರಲ್ಲಿ ಚಂದ್ರಶೇಖರ ಶೆಟ್ಟಿ ವಾಸವಾಗಿದ್ದು, ರಿಕ್ಷಾ ಚಾಲಕನಾಗಿದ್ದರು. ಜಾಗದ ವ್ಯವಹಾರಗಳನ್ನು ನಡೆಸುತ್ತಿದ್ದ ತುಕ್ರಪ್ಪ ಶೆಟ್ಟಿ ಅವರ ಪತ್ನಿಗೆ ದೂರ ಸಂಬಂಧಿಯೂ ಆಗಿದ್ದ. ತುಕ್ರಪ್ಪ ಶೆಟ್ಟಿ ಅವರ ವ್ಯವಹಾರದ ಬಗ್ಗೆ ಮಾಹಿತಿ ತಿಳಿದುಕೊಂಡ ಚಂದ್ರಶೇಖರ ಶೆಟ್ಟಿ ದಾವೂದ್ ಹಕೀಂ ಸಹಾಯದಿಂದ ತಂಡ ರಚಿಸಿ ದರೋಡೆ ಮಾಡಿದ್ದ.
ಶಿಶಿಲದಲ್ಲಿದ್ದ ತುಕ್ರಪ್ಪ ಶೆಟ್ಟಿ ಕೃಷಿ ಭೂಮಿಯನ್ನು ಮಾರಾಟ ಮಾಡುವುದರಿಂದ ಮನೆಯಲ್ಲಿ ಭಾರೀ ಮೊತ್ತದ ಹಣ ಇರಬಹುದು ಎಂದು ಭಾವಿಸಿ ದರೋಡೆಗೆ ಮುಂದಾಗಿದ್ದ. ದರೋಡೆ ನಡೆದ ಬಳಿಕ ತುಕ್ರಪ್ಪ ಶೆಟ್ಟಿ ಅವರನ್ನು ಭೇಟಿ ಮಾಡಿದ ಆತ ನಿಮ್ಮಂತ ವ್ಯಕ್ತಿಗೆ ಈ ರೀತಿ ಆಗಬಾರದಿತ್ತು ಎಂದು ಸಹಾನುಭೂತಿಯ ನಾಟಕವಾಡಿದ್ದ. ರಿಕ್ಷಾ ಚಾಲಕನಾಗಿದ್ದ ಚಂದ್ರಶೇಖರ ಶೆಟ್ಟಿ ಬಳ್ಳಮಂಜದಲ್ಲಿ 12 ಎಕ್ರೆ ಹಾಗೂ ನೆಲ್ಯಾಡಿಯಲ್ಲಿ 2 ಸೈಟ್ಗಳನ್ನು ಖರೀದಿಸಿದ್ದ. ಮನೆಯೊಳಗೆ ಭಾರೀ ಸಂಪತ್ತು ಇದೆ ಎನ್ನುವ ಮಾಹಿತಿಯನ್ನು ಈ ದರೋಡೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿ ಜಾಮೀನಿನ ಮೂಲಕ ಹೊರಬಂದಿರುವ ಬಶೀರ್ನಿಗೆ ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದು, ಮನೆಯ ಬಗ್ಗೆಯೂ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದರು. ಚಂದ್ರಶೇಖರ್ ನೀಡಿದ ಮಾಹಿತಿಯನ್ನು ಬಶೀರ್ ಸುರತ್ಕಲ್ನ ದಾವೂದ್ ಹಕೀಂಗೆ ತಿಳಿಸಿ ದರೋಡೆ ನಡೆಸುವ ಸಂಚು ರೂಪಿಸಿದ್ದ.
ದರೋಡೆ ನಡೆಸಿದ್ದ ತಂಡ ತುಕ್ರಪ್ಪ ಶೆಟ್ಟಿ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಗಾರ ದೋಚಿದ್ದರು. ಮೂಡುಬಿದಿರೆ ಪೊಲೀಸರು ಈ ದರೋಡೆ ನಡೆಸಿದ ತಂಡದ 13 ಮಂದಿಯನ್ನು ಈ ಮೊದಲೇ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಾದ ಚಂದ್ರಶೇಖರ ಶೆಟ್ಟಿ ಹಾಗೂ ದಾವೂದ್ ಹಕೀಂ ಅನ್ನು ನೆಕ್ಕಿಲಾಡಿಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ವಿಶೇಷ ಅಪರಾಧ ಪತ್ತೆ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.