ಮಂಜೇಶ್ವರ, ಆ. 09 (DaijiworldNews/SM): ಕೆದಂಬಾಡಿಯ ಮರದ ವ್ಯಾಪಾರಿ ಇಸ್ಮಾಯಿಲ್ ಎಂಬವರನ್ನು ಪತ್ನಿಯ ಜೊತೆ ಸೇರಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನಾಸರ್ ಹುಸೈನ್(35) ಎಂದು ಗುರುತಿಸಲಾಗಿದೆ.
ತಲಪಾಡಿ ಬೀರಿ ಸಮೀಪದಿಂದ ಈತನನ್ನು ಬಂಧಿಸಲಾಗಿದೆ. ಇಸ್ಮಾಯಿಲ್ ರ ಪತ್ನಿ ಆಯಿಷಾಳ ಜೊತೆ ಸೇರಿ ಮೂವರು ಕೃತ್ಯ ನಡೆಸಿದ್ದರು, ಆಯಿಷಾ ಹಾಗೂ ಇನ್ನೋರ್ವ ಆರೋಪಿ ಮುಹಮ್ಮದ್ ಹನೀಫ್ ನಡುವೆ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದೆ ಕೃತ್ಯಕ್ಕೆ ಕಾರಣವಾಗಿತ್ತು. ಅಂದು ರಾತ್ರಿ ಮಲಗಿದ್ದ ಇಸ್ಮಾಯಿಲ್ ರನ್ನು ಪತ್ನಿ ಆಯಿಷಾ, ಮುಹಮ್ಮದ್ ಹನೀಫ್ ಮತ್ತು ನಾಸರ್ ಸೇರಿ ಕೊಲೆಗೈದಿದ್ದರು.
ಹೃದಯಾಘಾತದಿಂದ ಪತಿ ಮೃತಪಟ್ಟಿರುವುದಾಗಿ ಪತ್ನಿ ಆಯಿಷಾ ಸಂಬಂಧಿಕರು ಮತ್ತು ಸ್ಥಳೀಯರಲ್ಲಿ ಹೇಳಿದ್ದರು. ಆದರೆ ಕುತ್ತಿಗೆಯಲ್ಲಿ ಗಾಯ ಕಂಡು ಬಂದ ಹಿನ್ನಲೆಯಲ್ಲಿ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಎಂದು ಸಾಬೀತಾಗಿತ್ತು. ಬಳಿಕ ಪೊಲೀಸರು ಆಯಿಷಾ ಳನ್ನು ಪ್ರಶ್ನಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು,. ಆಯಿಷಾ ಮತ್ತು ಹನೀಫ್ ನನ್ನು ಬಂಧಿಸಲಾಗಿತ್ತು. ಆದರೆ ನಾಸರ್ ತಲೆ ಮರೆಸಿಕೊಂಡಿದ್ದನು. ಇದೀಗ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.