ಉಡುಪಿ, ಆ 09 (DaijiworldNews/PY): "ಮಲ್ಪೆಯ ಮೀನುಗಾರರಿಗೆ ವಿಶೇಷವಾದ ಲಸಿಕಾ ಶಿಬಿರ ಆಯೋಜಿಸುವಂತೆ ಬೇಡಿಕೆಯಿದೆ, ಹೆಚ್ಚು ಸಮಯ ಬಂದರಿನ ಒಳಗೆ ಇರುತ್ತಾರೆ. ಹಾಗಾಗಿ ಪ್ರತ್ಯೇಕ ಶಿಬಿರ ಮಾಡುವ ಬೇಡಿಕೆ ಇದೆ. ಈಗಾಗಲೇ ಮುಖ್ಯಮಂತ್ರಿಯವರು ಉತ್ತರ ಕರ್ನಾಟಕದ ಬಂದರಿನಲ್ಲಿ ಒಂದು ಲಸಿಕಾ ಕೇಂದ್ರ ತೆರೆಯಲು ನಿರ್ಧರಿಸಿದ್ದಾರೆ. ಮಲ್ಪೆಯ ಬಂದರಿನಲ್ಲೂ ಒಂದು ಲಸಿಕಾ ಕೇಂದ್ರ ತೆರೆಯಬೇಕು ಎಂದು ನಾವು ಆಗ್ರಹಿಸುತ್ತೇವೆ" ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
"ಜಿಲ್ಲಾ ಕೋಟಾದಡಿ ಬರುವ ಲಸಿಕೆ ಜಿಲ್ಲೆಗೆ ಸಾಕಾಗಲ್ಲ. ಆದ್ದರಿಂದ ಮೀನುಗಾರರಿಗೆ ಪ್ರತ್ಯೇಕ ಕೋಟಾ ಕೊಟ್ಟು ಬಂದರಿನೊಳಗೆ ಲಸಿಕೆ ಕೊಡುವ ವ್ಯವಸ್ಥೆ ಆಗಬೇಕು. ಕೇವಲ ಮೀನುಗಾರರಿಗಾಗಿ 15,000-20,000 ಲಸಿಕೆ ಬೇಕು. ಅವರು ಅವರಾಗಿಯೇ ಬಂದು ಲಸಿಕೆ ತೆಗೆದುಕೊಳ್ಳುವ ಸ್ವಭಾವದರಲ್ಲ. ಹಾಗಾಗಿ ಅವರ ಸಂಘದ ಮೂಲಕ ಅಲ್ಲಿಯೇ ವ್ಯವಸ್ಥೆ ಮಾಡುವುದು ಒಳ್ಳೆಯದು ಎಂದು ಮುಖ್ಯಮಂತ್ರಿಯವರಲ್ಲಿ ವಿನಂತಿ ಮಾಡುತ್ತೇನೆ. ಗುರುವಾರ ಅವರ ಭೇಟಿಯಾಗಿ, ಮನವಿ ಪತ್ರ ಕೊಡುತ್ತೇನೆ" ಎಂದು ಹೇಳಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಮುಜರಾಯಿ ಇಲಾಖೆಯಲ್ಲಿ ಮುಂದುವರಿಯುವ ಜನರ ಇಂಗಿತಕ್ಕೆ ಉತ್ತರಿಸಿದ ಶಾಸಕ ಭಟ್, "ಅವರ ಎರಡು ವರ್ಷದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಈ ಇನ್ನೂ ಉತ್ತಮ ಖಾತೆ ನೀಡಿದ್ದಾರೆ. ಮುಂದೆ ಅವರು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡುತ್ತಾರೆ. ಮುಜರಾಯಿ ಇಲಾಖೆಯ ಕೆಲಸವನ್ನು ಈಗ ಬಂದ ಹೊಸ ಸಚಿವರು ಮುಂದುವರೆಸುತ್ತಾರೆ" ಎಂದರು.