ಕಾರ್ಕಳ, ಆ 09 (DaijiworldNews/PY): "ಕೃಷಿ ರಂಗದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಹೆಸರಲ್ಲಿ ಕೇಂದ್ರ ಸರಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿದೆ. ನಮ್ಮ ವ್ಯವಸಾಯ ರಂಗವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಕಾರ್ಪೋರೇಟ್ ಕಂಪೆನಿಗಳ ಪರವಾಗಿದೆ" ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಆರೋಪಿಸಿದ್ದಾರೆ.
ನಗರದ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಎಡಪಕ್ಷಗಳ ವತಿಯಿಂದ ಆಯೋಜಿಸಲಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಕಾರ್ಪೋರೇಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ ಎಡಪಕ್ಷಗಳು ಕರೆ ನೀಡಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಬೇಸಾಯದಲ್ಲಿ ಕೃಷಿಕೂಲಿಕಾರರು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಆದರೆ ಕೇಂದ್ರ ಸರಕಾರ ಕೃಷಿಕೂಲಿಕಾರರನ್ನು ಗಣನೆಗೆ ತೆಗೆದು ಕೊಳ್ಳುವುದಿಲ್ಲ. ದೇಶದಲ್ಲಿ ಋಣ ಮುಕ್ತಿ ಕಾನೂನು ಇಲ್ಲದೆ ಇರುವುದರಿಂದ ಕೂಲಿಕಾರರು ಮಾಡಿದ ಸಾಲವನ್ನು ವಾಪಾಸ್ ಕೊಡಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಾರೆ. ಇನ್ನೊಂದೆಡೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಇಲ್ಲದೆ ದಿವಾಳಿಯಾಗುತ್ತಿದ್ದಾನೆ. ಕಳೆದ 40 ವರ್ಷಗಳಲ್ಲಿ ಮೂರು ಲಕ್ಷ ರೈತ ಹುತಾತ್ಮರಾಗಿದ್ದಾರೆ. ಗೊಬ್ಬರ, ವಿದ್ಯುತ್, ಬೀಜ ಇತ್ಯಾದಿ ದರ ಮೊದಲೇ ನಿಗದಿಯಾಗಿರುತ್ತದೆ. ಆದರೆ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಲು ಕೇಂದ್ರ ಸರಕಾರ ಮೀನಾಮೇಷ ಎಣಿಸುತ್ತಿದೆ" ಎಂದು ಅವರು ಸರಕಾರದ ಕ್ರಮವನ್ನು ಖಂಡಿಸಿದರು.
ಸಿಐಟಿಯು, ಎಐಕೆಎಸ್, ಎಐಎಡಬ್ಲೂಯು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಜರಗಿದ ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ತಾಲೂಕು ಸಂಚಾಲಕ ಶೇಖರ ಕುಲಾಲ ಕಾರ್ಕಳ, ಮುಖಂಡರಾದ ರತ್ನಾಕರ ಪೂಜಾರಿ ಮುದ್ರಾಡಿ, ಲೆಮಿನಾ ಪೌಂಡ್ರಿಲಿ, ಕಾರ್ಮಿಕ ಸಂಘದ ಅಧ್ಯಕ್ಷ ಮೋಹನ ಚಂದ್ರ ಶೆಟ್ಟಿ ನಿಟ್ಟೆ, ಕಾರ್ಯದರ್ಶಿ ನಾಗೇಶ ಕುಮಾರ ನಿಟ್ಟೆ ಮೊದಲಾದವರು ನೇತೃತ್ವ ವಹಿಸಿದ್ದರು.