ಕಾರ್ಕಳ, ಆ 09 (DaijiworldNews/PY): "ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಪೂರ್ತಿ ವಿದ್ಯುತ್ ಸರಬರಾಜಿಗೆ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದಕ್ಕೆ ಪೂರಕವಾಗಿ ಬಜಗೋಳಿ, ಅಜೆಕಾರು, ಬೈಲೂರು, ಬೆಳ್ಮಣ್ಗಳಲ್ಲಿ ಸಬ್ ಸ್ಟೇಶನ್ ಸ್ಥಾಪನೆ ಶೀಘ್ರ ಆರಂಭವಾಗಲಿದೆ. ವಿದ್ಯುತ್ ಇಲ್ಲದ ಮನೆಗಳು ಬಾಕಿ ಇದ್ದಲ್ಲಿ ಅಂತಹ ಮನೆಗಳನ್ನು ಗುರುತಿಸಿ ಶರಬರೆದು ಎಲ್ಲ ಮನೆಗೂ ವಿದ್ಯುತ್ ಸಂಪರ್ಕ ನೀಡುವ ಧನಾತ್ಮಕ ಚಿಂತನೆ ಮೆಸ್ಕಾಂ ಇಲಾಖೆಯಲ್ಲಿರಬೇಕು" ಎಂಬ ಅಶಯವನ್ನು ಇಂಧನ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ವ್ಯಕ್ತಪಡಿಸಿದರು.
ಸೋಮವಾರದಂದು ಕಾರ್ಕಳ ತಾಲೂಕು ಪಂಚಾಯತ್ನ ಸಾಮರ್ಥ್ಯ ಸಭಾಂಗಣದಲ್ಲಿ ಜರುಗಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ, ತಾ.ಪಂ ಕಾರ್ಕಳ ಮತ್ತು ಹೆಬ್ರಿ ಇದರ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಪ್ರಕರಣಗಳು ಹೆಚ್ಚಿರುವ ಗ್ರಾಮಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಬೇಕು. ಶಾಲೆಗಳು ಆರಂಭವಾಗುವ ಮೊದಲು ವ್ಯಾಕ್ಸಿನೇಶನ್ ಆಗದಿರುವ ಶಿಕ್ಷಕರಿಗೆ ಲಸಿಕೆ ಶೀಘ್ರ ಪೂರ್ಣಗೊಳಿಸುವುದು. ಆಕ್ಸಿಜನ್ ಜನರೇಟರ್ ಅಳವಡಿಕೆ ಕಾಮಗಾರಿ 1 ವಾರದೊಳಗೆ ಶೀಘ್ರ ಪೂರ್ಣಗೊಳಿಸುವಂತೆ ಸೂಚಿದರು.
ಪರಿಶಿಷ್ಟ ಜಾತಿ ಪಂಗಡಗಳಿಗೆ ಸಂಬಂಧಿಸಿದ ಮೊಗೆರ್ಕಳ, ದೈವಸ್ಥಾನಗಳ ಜಾಗಗಳ ಜಂಟಿ ಸರ್ವೆ ತಕ್ಷಣವೇ ನಡೆಸುವಂತೆ ಸಚಿವರು ಸೂಚಿಸಿದರು. 94ಸಿ. 944 ಸಿ.ಸಿ, 53 ನಮೂನೆಯ ಫಲಾನುಭವಿಗಳ ಯಾವ ಅರ್ಜಿಗಳನ್ನು ತಿರಸ್ಕರಿಸಬಾರದು. ಮೊದಲು ನನ್ನ ಗಮನಕ್ಕೆ ತನ್ನಿ, ಮಂಜೂರಾತಿ ನೀಡಲು ಕಾನೂನಿನ ತೊಡಕು ಇದ್ದರೆ ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಲು ಪ್ರಯತ್ನಿಸುವ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಶೀಘ್ರ ಸರಕಾರ ಪರಿಹರಿಸಲಿದೆ. ಮಳೆಹಾನಿ ಪರಿಹಾರಗಳನ್ನು 48 ತಾಸಿನೊಳಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
"ಡಾಟಾ ಎಂಟ್ರಿಯನ್ನು ಎಲ್ಲ ಇಲಾಖೆಗಳು ಅಳವಡಿಸಿಕೊಳ್ಳಬೇಕು. ಮುಂದಿನ 15 ದಿನಗಳು ಕಳೆದು ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಮತ್ತೆ ಸಭೆ ನಡೆಸಲಿದ್ದೇನೆ. ಸಾರ್ವಜನಿಕ ಸೇವೆಗಳು ಪಾರದರ್ಶಕವಾಗಿ, ಮಾದರಿಯಾಗಿ ನಡೆಸಲು ಕಾರ್ಕಳ, ಹೆಬ್ರಿ ತಾಲೂಕಿನ ಪ್ರಮುಖ ಅಧಿಕಾರಿಗಳ ಒಳಗೊಂಡ ಒಂದು ವಿಶೇಷ ಸಮಿತಿಯನ್ನು ಕೂಡ ರಚಿಸಲಾಗುವುದು" ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.
ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ:
"38 ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಂದ ದೂರುಗಳು ನೇರ ನನಗೆ ಬಾರದ ರೀತಿಯಲ್ಲಿ ಸ್ಥಳಿಯವಾಗಿಯೇ ಪರಿಹಾರ ಕಾಣುವ ರೀತಿಯಲ್ಲಿ ಅಬಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಬದ್ಧತೆ, ಭ್ರಷ್ಟಚಾರ ರಹಿತವಾಗಿ ಸ್ಥಳಿಯ ಜನಪ್ರತಿನಿಗಳ ವಿಶ್ವಾಸ ಪಡೆದುಕೊಂಡು ಕಾರ್ಯನಿರ್ವಹಿಸಿ ಆಡಳಿತ ನಡೆಯಬೇಕು. ಸ್ವಚ್ಚ ಕಾರ್ಕಳ ಸ್ವರ್ಣ ಕಾರ್ಕಳ ಭಾಷಣದ ವಸ್ತುವಲ್ಲ. ಕಾರ್ಯದಲ್ಲಿ ಆಗಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿ, ಇತ್ಯರ್ಥ, ಪರಿಹಾರವಾಗದಿರಲು ಕಾರಣ ಇವುಗಳ ಅಂಕಿ ಅಂಶ ಮಾಹಿತಿಯನ್ನು ನಿತ್ಯ ಡಾಟಾದಲ್ಲಿ ಸಂಗ್ರಹಿಸಿ ವರದಿ ಸಿದ್ಧಪಡಿಸಿಕೊಂಡಿರಬೇಕು. ಆ ಮೂಲಕ ಕಾರ್ಕಳ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಬೇಕು. ಅದನ್ನು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅನುಕರಣೆಯಾಗುವಂತಾಗಲಿ" ಎಂದು ಸಚಿವ ಸುನೀಲ್ಕುಮಾರ್ ಹೇಳಿದರು.
ಕೈಗಾರಿಕೆ, ಕನ್ನಡ ಭವನಕ್ಕೆ ಜಾಗ ಗುರುತಿಸಿ:
"ಕೈಗಾರಿಕೆ ವಲಯ ಸ್ಥಾಪಿಸುವ ಮೂಲಕ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಬಜಗೋಳಿಯಿಂದ ಬೆಳ್ಮಣ್ವರೆಗಿನ ಯಾವುದಾದರು ಒಂದು ಕಡೆ 100 ಎಕರೆ ಗುರುತಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಸಬೇಕು. ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿ ತೆರೆಯುವ ಉದ್ದೇಶದಿಂದ ಪುರಸಭಾ ಅಸುಪಾಸಿನಲ್ಲಿ 2 ಎಕರೆ ಜಾಗವನ್ನು ತುರುತಿಸುವ ಕಾರ್ಯವು ಇದರ ಜೊತೆಯಲ್ಲಿ ಸಾಗಬೇಕು. ತನ್ಮೂಲಕ ಕಾರ್ಕಳ ಕ್ಷೇತ್ರ ಅಭಿವೃದ್ಧಿ ಹೊಂದಬೇಕು" ಎಂದರು.
ನೀರಾವರಿ ಇಲಾಖೆಯ ಅಧಿಕಾರಿ ಗೈರು:
ಸಭೆ ಆರಂಭವಾಗುತ್ತಿದ್ದಂತೆ ನೀರಾವರಿ ಇಲಾಖೆಯಿಂದ ಮಾಹಿತಿ ಪಡೆಯಲು ಸಚಿವ ಸುನೀಲ್ಕುಮಾರ್ ಮುಂದಾಗಿದ್ದರು. ಮೊದಲ ಸಭೆಯಲ್ಲಿ ಮೊದಲ ಮಾಹಿತಿ ಪಡೆಯುತ್ತಿರುವಾಗಲೇ ಅಧಿಕಾರಿಗಳು ಗೈರು ಹಾಜರಾಗಿರುವುದು ಸಚಿವರ ಗಮನಕ್ಕೆ ಬಂದು. ಕರ್ತವ್ಯ ನಿಷ್ಠೆ ತೋರಲೇಬೇಕೆಂದು ವಿವಿಧ ಇಲಾಖಾಧಿಕಾರಿಗಳಿಗೆ ಕಿವಿಮಾತು ಹೇಳುತ್ತಿದ್ದಂತೆ ಸಭೆಗೆ ತಡವಾಗಿ ಬಂದ ಇಲಾಖೆಯ ಅಧಿಕಾರಿಯೋರ್ವರನ್ನು ಸಚಿವರು ಹೊರಗೆ ತೆರಳುವಂತೆ ಸೂಚಿಸಿ ತರಾಟೆಗೆ ತೆಗೆದುಕೊಂಡು ಘಟನೆಯೂ ನಡೆಯಿತು.
"ಸಚಿವನಾಗಿ ರಾಜ್ಯದಲ್ಲೆ ಓಡಾಡಿ ಕೆಲಸ ನಿರ್ವಹಿಸಬೇಕಿದೆ. ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನೀವೆಲ್ಲ ಸಹಕರಿಸಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದಲ್ಲಿ ಮಾತ್ರ ರಾಜ್ಯದಲ್ಲೂ ಮಾದರಿಯಾಗಿ ಕೆಲಸ ನಿರ್ವಹಿಸಲು ನನಗೆ ಅಧಿಕಾರಿಗಳು ನೀವೆಲ್ಲರು ಸಹಕರಿಸಬೇಕು" ಎಂದರು.
ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಎಸ್ ಮರಬಳ್ಳಿ, ಹೆಬ್ರಿ ತಹಶೀಲ್ದಾರ್ ಪುರಂದರ, ಹೆಬ್ರಿ ತಾ.ಪಂ ಆಡಳಿತಾಧಿಕಾರಿ ಶ್ರೀನಿವಾಸ್ ಕಾರ್ಕಳ ತಾ.ಪಂ ಆಡಳಿತಾಧಿಕಾರಿ ಪ್ರತಿಭಾ ಆರ್, ಕಾರ್ಕಳ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್ ಹೆಬ್ರಿ ತಾ.ಪಂ ಕಾರ್ಯನಿರಗವಾಹಣಾಧಿಕಾರಿ ಶಶಿಧರ್ ಕೆ.ಜಿ , ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.