ಮಂಗಳೂರು, ಆ 09 (DaijiworldNews/MS): ಅಂಗಡಿ ಮಾಲೀಕನಿಂದ ರೂ.14,000 ನಗದನ್ನು ಬೈಕಿನಲ್ಲಿ ಬಂದ ಮೂವರ ತಂಡ ದರೋಡೆ ನಡೆಸಿರುವ ಘಟನೆ ತಲಪಾಡಿಯ ಮೇಗಿನಪಂಜಾಳದಲ್ಲಿ ಆ.09 ರ ನಸುಕಿನ ಜಾವ ಸಂಭವಿಸಿದೆ.
ಸ್ಥಳೀಯ ನಿವಾಸಿ ಹಸೈನಾರ್ (57) ಯಾನೆ ಖಾಸಿಂ ಎಂಬವರು ದರೋಡೆಗೊಳಗಾದ ಅಂಗಡಿ ಮಾಲೀಕ. ಅಲ್ -ಫಲಾಹ್ ತಟ್ಟುಕಡ ಅನ್ನುವ ದಿನಸಿ ಅಂಗಡಿ ಹೊಂದಿರುವ ಇವರು ಬೆಳಿಗ್ಗೆ ಅಂಗಡಿ ತೆರೆಯುವ ವೇಳೆ ಘಟನೆ ನಡೆದಿದೆ. ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಓರ್ವ ಹಸೈನಾರ್ ಅವರಿಂದ ರೂ.14,000 ನಗದು ದೋಚಿ ಪರಾರಿಯಾಗಿದ್ದಾನೆ. ಘಟನೆ ವೇಳೆ ಹಸೈನಾರ್ ಗಾಯಗೊಂಡಿದ್ದಾರೆನ್ನಲಾಗಿದೆ. ಹಸೈನಾರ್ ಒಂದು ಬಾರಿ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ತೆರಳಿ ತನಗೆ ಬಿದ್ದು ಗಾಯವಾಗಿರುವುದಾಗಿ ಹೇಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿದ್ದರು.
ಮಧ್ಯಾಹ್ನ ಮತ್ತೆ ವಾಪಸ್ಸಾದ ಹಸೈನಾರ್ ದರೋಡೆ ನಡೆದಿರುವ ವಿಚಾರವನ್ನು ತಿಳಿಸಿದ್ದು, ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಕಂಡುಬಂದ ಸಿಸಿಟಿವಿ ಆಧಾರದಲ್ಲಿ ಬೈಕಿನಲ್ಲಿ ಮೂವರು ತೆರಳಿರುವ ಕುರಿತು ವೀಡಿಯೋ ದಾಖಲೆಯಿದೆ.