ಕಾಸರಗೋಡು,ಆ 09 (DaijiworldNews/MS): ಕರ್ನಾಟಕಕ್ಕೆ ಬರುವ ಕೇರಳದ ವಾಹನ ಪ್ರಯಾಣಿಕರಿಗೆ ಕೋವಿಡ್ ನೆಪದಲ್ಲಿ ವಿಧಿಸಿರುವ ನಿರ್ಬಂಧದ ವಿರುದ್ಧ ಆಕ್ರೋಶ ತೀವ್ರಗೊಳ್ಳುತ್ತಿದ್ದು , ಆ.9 ರ ಬೆಳಿಗ್ಗೆ ಯು ಡಿ ಎಫ್ ಮತ್ತು ಎಲ್ ಡಿ ಎಫ್ ನ ಯುವಜನ ಸಂಘಟನೆಗಳು ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿದವು.
ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಅಂತಾರಾಜ್ಯ ಸಂಚಾರವನ್ನು ಯಾವುದೇ ಕಾರಣಕ್ಕೆ ನಿರ್ಬಂಧಿಸುವಂತಿಲ್ಲ ಎಂದು ಆದೇಶ ನೀಡಿದ್ದರೂ ಕರ್ನಾಟಕ ಸರಕಾರ ಕೋವಿಡ್ ಹೆಸರಲ್ಲಿ ಗಡಿ ಬಂದ್ ಮಾಡಿ ಬಿಕ್ಕಟ್ಟು ಸೃಷ್ಟಿಸಿದ್ದು , ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಲೇ ಮಧ್ಯಪ್ರವೇಶಿಸಿ ಗಡಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಯು. ಡಿ .ಎಫ್ ನಾಯಕರು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹೊಂದಿರುವ ವ್ಯಾಕ್ಸಿನ್ ಪ್ರಮಾಣ ಪತ್ರಕ್ಕೆ ಬೆಲೆಯೇ ಇಲ್ಲ ಎಂದು ಪ್ರಶ್ನಿಸಿದ ಕಾರ್ಯಕರ್ತರು ವ್ಯಾಕ್ಸಿನ್ ಪ್ರಮಾಣ ಪತ್ರದ ಪ್ರತಿಯನ್ನು ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.
ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಘಳ್ , ಕಾಂಗ್ರೆಸ್ ಮುಖಂಡ ಇರ್ಷಾದ್ ಮಂಜೇಶ್ವರ , ಹರ್ಷದ್ ವರ್ಕಾಡಿ , ಸಿದ್ದಿಕ್ ಮಂಜೇಶ್ವರ , ಡೆರಿಕ್ ಮೊಂತೇರೊ , ಹನೀಫ್ , ಬಾವಾ ಮಂಜೇಶ್ವರ , ಎಂ .ಪಿ ಬದ್ರುದ್ದೀನ್ ನೇತೃತ್ವ ನೀಡಿದರು. ಎಲ್ ಡಿ ಎಫ್ ನೇತೃತ್ವದಲ್ಲೂ ಪ್ರತಿಭಟನೆ ನಡೆಯಿತು .ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಬಿ . ವಿ ರಾಜನ್ ನೇತೃತ್ವ ನೀಡಿದರು .
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ದರು . ಪ್ರತಿಭಟನಾಕಾರರು ತಮ್ಮ ಅಹವಾಲನ್ನು ಜಿಲ್ಲಾಧಿಕಾರಿಯವರ ಜೊತೆ ತೋಡಿಕೊಂಡರು.