ಸುಳ್ಯ, ಆ 09 (DaijiworldNews/PY): ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರು ತಮ್ಮ ಕ್ಷೇತ್ರದಲ್ಲಿ ಜೀಪ್ನಲ್ಲಿ ತೆರಳುತ್ತಿದ್ದ ಸಂದರ್ಭ ಕೆಸರುಮಯ ರಸ್ತೆಯ ಮಧ್ಯೆ ಜೀಪ್ ನಿಂತುಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಗಡಿ ಪ್ರದೇಶಕ್ಕೆ ತೆರಳುವ ಸಂದರ್ಭ ರಸ್ತೆಯ ಅವ್ಯವಸ್ಥೆಯ ಕಾರಣದಿಂದ ಕಾರನ್ನು ಬಿಟ್ಟು ಜೀಪ್ನಲ್ಲಿ ತೆರಳಿದ್ದರು. ಈ ವೇಳೆ ರಸ್ತೆ ಏರಿನಲ್ಲಿ ಸಚಿವರು ಹೋಗುತ್ತಿದ್ದ ಜೀಪ್ ಮುಂದೆ ಸಾಗದೇ ರಸ್ತೆ ಮಧ್ಯೆ ಬಾಕಿಯಾಯಿತು. ಈ ಸಂದರ್ಭ ಸಚಿವರು ಜೀಪ್ನಿಂದ ಇಳಿದು ಕಾಲ್ನಡಿಗೆ ಸಾಗಿದ್ದು, ಕಾರ್ಯಕರ್ತರು ಜೀಪ್ ಅನ್ನು ತಳ್ಳಿದ್ದಾರೆ.
ಹಲವು ವರ್ಷಗಳಿಂದ ಆಲೆಟ್ಟಿ-ಕೂಟೇಲು ರಸ್ತೆ ಹದಗೆಟ್ಟಿದ್ದು, ಕಳೆದ ಚುನಾವಣೆಯ ವೇಳೆ ಸ್ಥಳೀಯರು ಚುನಾವಣೆ ಬಹಿಷ್ಕರಿಸಿದ್ದರು. ಆ ಸಂದರ್ಭ ಸ್ಥಳಕ್ಕೆ ತೆರಳಿದ್ದ ಅಂಗಾರ ಮುಂದಿನ ಬಾರಿ ರಸ್ತೆ ಅಭಿವೃದ್ದಿಪಡಿಸುವ ಭರವಸೆ ನೀಡಿದ್ದರು. ಇದೀಗ ಎರಡನೇ ಬಾರಿಗೆ ಸಚಿವ ಸ್ಥಾನ ಪಡೆದು, ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು, ಈ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ರಸ್ತೆ ಮಧ್ಯೆ ಜೀಪ್ ಬಾಕಿಯಾಗಿದೆ.
"ನಮ್ಮ ಸಮಸ್ಯೆಯ ಬಗ್ಗೆ ಎಷ್ಟೇ ಮನವಿ ಮಾಡಿಕೊಂಡರೂ ಕೂಡಾ ಯಾವುದೇ ರೀತಿಯಾದ ಪ್ರಯೋಜನವಾಗಲಿಲ್ಲ. ಈಗ ಸ್ವತಃ ಸಚಿವರಿಗೆ ಸಮಸ್ಯೆಯ ಗಂಭೀರತೆಯನ್ನು ಅನುಭವಿಸಿದ್ದಾರೆ. ಇನ್ನು ಮುಂದೆಯಾದರೂ ರಸ್ತೆ ಸರಿಯಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ" ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
"ಮೂರು ದಶಕಗಳಿಂದ ನಿರಂತರವಾಗಿ ಬಿಜೆಪಿಯನ್ನು ಗೆಲ್ಲಿಸಿದ ಸುಳ್ಯ ಕ್ಷೇತ್ರ ಯಾವಾಗ ಬದಲಾಗುತ್ತದೆ" ಎಂದು ಕ್ಷೇತ್ರದ ಜನರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ.
"ಕಾಶ್ಮೀರ ಬದಲಾಯಿತು ಹಾಗೆಯೇ ಅಯೋಧ್ಯೆಯಲ್ಲಿ ಮಂದಿರವರಳಿತು ಆದರೆ, ಸುಳ್ಯ ಕ್ಷೇತ್ರ ಯಾವಾಗ ಬದಲಾಗುತ್ತದೆ" ಎಂದು ಕೆಲವು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.