ಕಾರ್ಕಳ, ಆ.08 (DaijiworldNews/HR): ಹಬ್ಬಗಳ ಆಚರಣೆಯಲ್ಲಿ ಅದರದೇ ಆದ ಮಹತ್ವ ಇದೆ. ದೇವರು, ದೈವ, ನಂಬಿಕೆ ಇವುಗಳು ಭಾವನಾತ್ಮಕವಾಗಿ ಬೆಸೆಯುವಂತೆ ಮಾಡುತ್ತದೆ. ಪ್ರತಿಯೊಂದು ಆಚಾರ ಪದ್ಧತಿಯಲ್ಲಿ ನಂಬಿಕೆ ಆಡಗಿದೆ. ಹಿಂದಿನ ಸಂಪ್ರದಾಯಗಳನ್ನು ಅವಲೋಕಿಸಿದಾಗ ಅದರಲ್ಲಿ ವೈಜ್ಞಾನಿಕ ವಿಚಾರಗಳನ್ನು ಅಡಕವಾಗಿದೆ ಎಂದು ಭಾರತೀಯ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಮಿತ್ರಪ್ರಭ ಹೆಗ್ಡೆ ಹೇಳಿದರು.
ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಜರಗಿದ ಆಟಿದೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಕೃಷಿಗೆ ಒತ್ತುಕೊಡುವ ನಿಟ್ಟಿನಲ್ಲಿ ಆಟಿ ತಿಂಗಳಿನಲ್ಲಿ ಇತರ ಸಮಾರಂಭಗಳಿಗೆ ಬಿಡುವು ನೀಡಲಾಗಿತ್ತೇ ಹೊರತು ಆಟಿ ತಿಂಗಳು ಹಾಳಲ್ಲ. ಪ್ರಾಕೃತಿಕವಾಗಿ ಕಾಣ ಸಿಗುವ ಮರ, ಸಸ್ಯಗಳಲ್ಲಿಆಟಿ ತಿಂಗಳಿನಲ್ಲಿ ಔಷಧಗುಣ ಅಧಿಕವಾಗಿದೆ. ಇದೇ ಕಾರಣದಿಂದ ಆಟಿ ತಿಂಗಳಿನಲ್ಲಿ ಮಾನವನು ಪ್ರಕೃತಿಯೊಂದಿಗಿನ ನಂಟನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾನೆ" ಎಂದು ವಿವರಿಸಿದರು.
ಕೂಡು ಕುಟುಂಬಗಳಿದ್ದಾಗ ನೀತಿ ಕಥೆಗಳು, ಸಂಪ್ರದಾಯಕ ಆಟಗಳು ಎಳೆಯ ಮಕ್ಕಳ ಭೌದ್ಧಿಕತೆ ಹೆಚ್ಚಿಸುತ್ತಿತ್ತು. ಇಂದು ಅವೆಲ್ಲವೂ ಮರೆಯಾಗುತ್ತಿದೆ. ಸಾಮಾಜಿಕ ಜಾಲಗಳುಹತ್ತಿರವಾಗುತ್ತಾ ಒಂಟಿತನದತ್ತ ಕೊಂಡು ಹೋಗುತ್ತಿದೆ. ಇದು ಮಾನಸಿಕ ದಿವಾಳಿತನದತ್ತ ಬೊಟ್ಟುಮಾಡುತ್ತಿದೆ ಎಂದು ಮಿತ್ರಪ್ರಭ ವಿಷಾಧಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಮಾತನಾಡಿ, "ಹಬ್ಬಗಳು, ಪ್ರಾರ್ಥನೆಗಳು ಕೂಡಾಗಿ ಆಚರಿಸುವುದರಿಂದ ಸಹಮತ ಮೂಡುತ್ತದೆ. ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಬಹುದು. ಮತ್ತೊಬ್ಬರ ನೋವಿಗೆ ಸ್ಪಂದಿಸಬಹುದು. ಲಯನ್ಸ್ ಕ್ಲಬ್ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗುತ್ತಾ ಬಂದಿದೆ" ಎಂದರು.
ಲಯನ್ಸ್ ಕ್ಲಬ್ನ ಮಿಥುನ್ ಹೆಗ್ಡೆ, ಸುಭಾಸ್ ಸುವರ್ಣ. ಡಾ. ರಾಬರ್ಟ್ ಡಿಮೆಲ್ಲೋ, ಪ್ರಕಾಶ್ ಪಿಂಟೋ, ಪ್ರೋ.ಪದ್ಮನಾಭ ಗೌಡ ಉಪಸ್ಥಿತರಿದ್ದರು. ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ವಂದಿಸಿದರು.