ಕಾಸರಗೋಡು, ಆ.08 (DaijiworldNews/HR): ಜಿಲ್ಲೆಯಲ್ಲಿ ಸಸೂತ್ರ ಮತ್ತು ಪರಿಣಾಮಕಾರಿ ಕೊರೊನಾ ವ್ಯಾಕ್ಸಿನ್ಗೆ ವಿಶೇಷ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ವಾಕ್ಸಿನೇಷನ್ ಕೇಂದ್ರಗಳಲ್ಲಿ ಆ.9ರಿಂದ ವಾಕ್ಸಿನ್ ವಿತರಣೆಗೆ ಶೇ 50 ಆನ್ಲೈನ್ ಮೂಲಕದ ನೋಂದಣಿ, ಶೇ 50 ಆಫ್ ಲೈನ್ ನೋಂದಣಿ ಇರುವುದು. ಆನ್ಲೈನ್ ನೋಂದಣಿ ನಡೆಸುವವರು ತಮ್ಮ ಪಂಚಾಯತ್ನ ಲಸಿಕೆ ಕೇಂದ್ರವನ್ನು ಮಾತ್ರ ಆಯ್ಕೆ ಮಾಡಬೇಕು. ಆನ್ಲೈನ್ ಬುಕ್ಕಿಂಗ್ ಮೂಲಕ ಆಗಮಿಸುವವರು ಅದೇ ಪಂಚಾಯತ್ನ ನಿವಾಸಿಗಳೆಂದು ಖಚಿತಪಡಿಸುವ ಯಾವುದಾದರೂ ಸಾಕ್ಷ್ಯಾಧಾರ ಹಾಜರುಪಡಿಸಬೇಕು. ಶೇ 50 ಆಫ್ ಲೈನ್ ಮೂಲಕದ ನೋಂದಣಿಯಲ್ಲಿ ಶೇ 20 ದ್ವಿತೀಯ ಝೋನ್ ಗಾಗಿ ಮೀಸಲಿರಿಸಲಾಗುವುದು" ಎಂದಿದ್ದಾರೆ.
ಇನ್ನು ಆಫ್ಲೈನ್ ನಲ್ಲಿ ಬಾಕಿಯುಳಿಯುವ ಶೇ 80 ಆದ್ಯತೆ ಗುಂಪುಗಳನ್ನು ವಾರ್ಡ್ ವಿಂಗಡಿಸಿ ಆರೋಗ್ಯ ಕಾರ್ಯಕರ್ತರು ನಿಗದಿಪಡಿಸುವರು. ಆದ್ಯತೆ ಗುಂಪುಗಳಲ್ಲಿ 60 ವರ್ಷ ಪ್ರಾಯ ದಾಟಿದವರು, ವಿಶೇಷ ಚೇತನರು, ಪರಿಶಿಷ್ಟ ಜಾತಿ-ಪಂಗಡ ಜನಾಂಗದವರು, ರಾಜ್ಯದಿಂದ ಹೊರಗಡೆ ಕಲಿಕೆ ನಡೆಸುತ್ತಿರುವವರು, ವಲಸೆಗಾರರು ಮೊದಲಾದವರು ಸೇರಿದ್ದಾರೆ. ಆದ್ಯತೆ ಗುಂಪುಗಳ ನಂತರ 18 ಕ್ಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನ್ ನೀಡಲಾಗುವುದು" ಎಂದರು.
ಜಿಲ್ಲೆಯ ಪ್ರತಿ ಸಂಸ್ಥೆಗೆ ವಿತರಿಸುವ ಎಲ್ಲ ವಾಕ್ಸಿನ್ಗಳು ಎರಡು ದಿನಗಲಲ್ಲಿ ಪೂರ್ಣರೂಪದಲ್ಲಿ ಬಳಕೆಯಾಗುವ ರೀತಿ ಚುಚ್ಚುಮದ್ದು ನೀಡಿಕೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಆಕ್ಷನ್ ಪ್ಲಾನ್ ನಲ್ಲಿ ತಿಳಿಸಲಾದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ವಾಕ್ಸಿನ್ ನೀಡಿಕೆಯಲ್ಲಿ ಸ್ವಜನಪಕ್ಷಪಾತಕ್ಕೆ ಅನುಮತಿ ನೀಡುವುದಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನು ಘಟನೆಗಳು ನಡೆದಲ್ಲಿ ಪೊಲೀಸರ ಸಹಾಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.