ಮಂಗಳೂರು, ಆ 08 (DaijiworldNews/PY): ಉತ್ತರ ಭಾರತದ ತಂಡವೊಂದು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರಿನ ಗಾಜು ಒಡೆದು ನಗದು, ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡುವಲ್ಲಿ ಸಕ್ರಿಯವಾಗಿದೆ ಎಂದು ನಗರದ ಪೊಲೀಸರು ಶಂಕಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಕೆಲವು ದಿನಗಳ ಹಿಂದೆ ನಗರದ ಉರ್ವಾಸ್ಟೋರ್ನಲ್ಲಿ ನಿಂತಿದ್ದ ಕಾರಿನ ಹಿಂಬದಿಯ ಗಾಜು ಒಡೆದು ಲ್ಯಾಪ್ಟಾಪ್ ಸೇರಿದಂತೆ ಐಪೋನ್ ಹಾಗೂ ಬ್ಯಾಂಕ್ಗಳ ಚೆಕ್ ಹಾಳೆಗಳನ್ನು ಕಳವು ಮಾಡಿದೆ. ಬಲ್ಮಠದಲ್ಲಿ ಕಾರೊಂದರ ಗ್ಲಾಸ್ ಮುರಿದು ಸುಮಾರು 40,000 ರೂ. ಹಣ ಹಾಗೂ ದಾಖಲೆಗಳನ್ನು ಒಳಗೊಂಡ ಬ್ಯಾಗ್ ಅನ್ನು ತಂಡ ಕಳವು ಗೈದಿದೆ ಎಂದು ತಿಳಿದುಬಂದಿದೆ.
ಈ ಕೃತ್ಯಗಳ ಹಿಂದೆ ಉತ್ತರಪ್ರದೇಶದ ಕುಖ್ಯಾತ ಓಜಿ ಕೊಪ್ಪಂ ಗ್ಯಾಂಗ್ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ತಂಡದ ಹಲವಾರು ಮಂದಿಯನ್ನು ಕರ್ನಾಟಕದ ಇತರ ಭಾಗಗಳಲ್ಲಿ ಬಂಧಿಸಲಾಗಿದೆ.
ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರಾ ಶೆಟ್ಟಿ ಎನ್ನುವವವರು ಆಗಸ್ಟ್ 6ರಂದು ತನ್ನ ಸ್ನೇಹಿತ ಶ್ರೀನಿವಾಸ್ ಭಟ್ ಎನ್ನುವವರ ಕಾರಿನಲ್ಲಿ ಕೊಲ್ಲೂರು, ಕಟೀಲು, ಮಂಗಳೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಸಂಜೆ ಉಡುಪಿಗೆ ವಾಪಾಸ್ಸಾಗಿದ್ದರು ಎನ್ನಲಾಗಿದೆ. ಸಿಟಿ ಸೆಂಟರ್ ಬಳಿಯ ಟ್ರೆಂಡ್ಸ್ ಫುಟ್ವೇರ್ ಅಂಗಡಿಯ ಬಳಿ ತನ್ನ ಕಾರನ್ನು ನಿಲ್ಲಿಸಿದ ನಂತರ ಅವಳು ಹೋಟೆಲ್ನಿಂದ ಊಟ ಪಾರ್ಸೆಲ್ ತರಲು ಹೋಗಿದ್ದರು. ಹೋಟೆಲ್ನಿಂದ ವಾಪಾಸ್ಸು ಬಂದು ನೋಡಿದಾಗ ಕಾರಿನ ಹಿಂಬದಿಯ ಗ್ಲಾಸ್ ಅನ್ನು ಒಡೆದು ಲ್ಯಾಪ್ಟಾಪ್ ಅನ್ನು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ.
ಘಟನೆಯ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.