ಉಡುಪಿ, ಆ.08 (DaijiworldNews/HR): "ಸರ್ಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯಾವುದೇ ಕಾರಣಕ್ಕೂ ವಾಣಿಜ್ಯೀಕರಣ ಆಗಬಾರದು, ಕಟ್ಟಡ ಸ್ಥಳಾಂತರ ಆಗಬಾರದು. ದಿವಂಗತ ಹಾಜಿ ಅಬ್ದುಲ್ಲಾರ ಆಶಯವನ್ನು ಈಡೇರಬೇಕು. ಸರಕಾರಿ ಆಸ್ಪತ್ರೆಯ ಸೇವೆಯನ್ನು ಎಲ್ಲರೂ ಸದುಪಯೋಗ ಪಡೆಯುವಂತಾಗಬೇಕು. ಬಡವರ ಸೇವೆಗೆ ಮುಕ್ತವಾಗಿರಲಿ" ಎಂದು ಹಾಜಿ ಅಬ್ದುಲ್ಲರ ಕುಟುಂಬಸ್ಥರು ಮತ್ತು ಇದರ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ರಾದ ಸೈಯದ್ ಸಿರಾಜ್ ಅಹ್ಮದ್ ಆಶಯ ವ್ಯಕ್ತಪಡಿಸಿದರು.
ಈ ಕುರಿತು ಹಾಜಿ ಅಬ್ದುಲ್ಲಾ ಸ್ಮರಣಾರ್ಥ ಚಾರೀಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಪಿ ವಿ ಭಂಡಾರಿ ಮಾತನಾಡಿ, "ಅಗಸ್ಟ್ 12 ರಂದು ಮಹಾನ್ ದಾನಿ ಹಾಜಿ ಅಬ್ದುಲ್ಲಾರವರು ಮರಣ ಹೊಂದಿದ ದಿನ, ಅವರು ಮಾಡಿರುವ 'ದಾನ ಮತ್ತು ಸಮಾಜಿಕ ಕಳಕಳಿಯ ಕೆಲಸಗಳು ಅವರ ಮರಣ ನಂತರವು ಇತರರಿಗೆ ಮಾದರಿಯಾಗಿ ಉಳಿದಿದೆ. ಹಾಜಿ ಅಬ್ದುಲ್ಲಾರವರು ತಮ್ಮ ಜೀವಿತಾವಧಿಯಲ್ಲಿ ಸರ್ಕಾರಕ್ಕೆ ದಾನವಾಗಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆ ಮತ್ತು ಅದಕ್ಕೆ ಸಂಬಂಧಿಸಿದ ಜಾಗವನ್ನು 2016 ರಲ್ಲಿ ಕರ್ನಾಟಕ ಸರ್ಕಾರ ಖಾಸಗಿಯವರಿಗೆ ಪಿ.ಪಿ.ಪಿ. ಮಾದರಿಯಲ್ಲಿ ನೀಡುವಾಗ ಈ ಕ್ರಮವನ್ನು ವಿರೋಧಿಸಿ ಉಡುಪಿಯ ಸಮಾನ ಮನಸ್ಕ ನಾಗರೀಕರು, ಸರ್ಕಾರಿ ಅಸ್ಪತ್ರೆ ಉಳಿಸಿ ಹೋರಾಟ ಸಮಿತಿ ಸದಸ್ಯರು, ಹಾಜಿ ಅಬ್ದುಲ್ಲಾ ಕುಟುಂಬ ಸದಸ್ಯರು ಮತ್ತು ಹಾಜಿ ಅಬ್ದುಲ್ಲಾ ಚಾರೀಟೇಬಲ್ ಟ್ರಸ್ಟ್ ಸದಸ್ಯರು ಪ್ರತಿಭಟನೆಯನ್ನು ಮಾಡಿ ಕಾನೂನಾತ್ಮಕ ಹೋರಾಟವನ್ನು ಮಾಡಿದೆ" ಎಂದರು.
ಇನ್ನು "ಪ್ರಸ್ತುತ ಸರ್ಕಾರಿ ಕುಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯನ್ನು ಬಿ.ಆರ್.ಎಸ್ ನವರು ತಮ್ಮಿಂದ ನಿರ್ವಹಣೆ ಮಾಡಲು ಸಾದ್ಯವಾಗುವುದಿಲ್ಲ ಎಂದು ಸರ್ಕಾರಕ್ಕೆ ಪತ್ರಬರೆದಿದ್ದಾರೆ ಎಂದು ಈಗಾಗಲೆ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಈ ಮೊದಲೆ ರಾಜ್ಯ ಮತ್ತು ದೇಶದಲ್ಲಿ ಪಿ.ಪಿ.ಪಿ.ಮಾದರಿಯ ಅಸ್ಪತ್ರೆಗಳು ಜನರಿಗೆ ಸೇವೆ ನೀಡಲು ವಿಫಲವಾಗಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನು ನೀಡಿ ಎಚ್ಚರಿಸಿದ್ದೆವು. ಅದರೂ ಆಗಿನ ಸರ್ಕಾರ ತರಾತುರಿಯಲ್ಲಿ ಮುಂದಾಲೋಚನೆ ಇಲ್ಲದೆ ನೀಡಿದರ ಫಲವಾಗಿ ಇಂದು 200 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯನ್ನು ಸರ್ಕಾರ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬಹುದು ಎಂಬ ಅತಂಕ ಉಡುಪಿ ಜನತೆಯಲ್ಲಿ ಮನೆ ಮಾಡಿದೆ" ಎಂದು ಹೇಳಿದ್ದಾರೆ.
"ಬಿ.ಆರ್.ಎಸ್ ಸಂಸ್ಥೆಯವರು ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸರ್ಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯನ್ನು ಖಾಸಗಿಯವರಿಗೆ ನಿರ್ವಹಣೆ ಮಾಡಲು ನೀಡದೆ, ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಸರ್ಕಾರವೇ ನಿರ್ವಹಿಸ ಬೇಕು ಎಂದು ಉಡುಪಿ ನಾಗರೀಕರ ಪರವಾಗಿ ನಾವು ಅಗ್ರಹಿಸುತ್ತೇವೆ. ಹಾಗೆಯೇ ಉಡುಪಿಯ ಹೃದಯ ಭಾಗದಲ್ಲಿ ಇರುವ ಹಾಜಿ ಬುಡನ್ ಶುಶೂಷಾಲಯ ಮೊದಲಿನಂತೆ ಕಾರ್ಯ ನಿರ್ವಹಿಸ ಬೇಕು. ನಮ್ಮ ಸ್ಥಳೀಯ ಆಡಳಿತವು ಹಾಜಿ ಬುಡನ್ ಶುಶ್ರೂಷಾಲಯದ ನಾಮಫಲಕ ಬಣ್ಣವನ್ನು ನೀಡದೆ ದಿವ್ಯ ನಿರ್ಲಕ್ಷ್ಯವನ್ನು ತೋರಿದೆ. ಜಾಗ ಮತ್ತು ಕಟ್ಟಡವನ್ನು ನೀಡಿದ ದಾನಿಗಳಿಗೆ ಕನಿಷ್ಠ ಕೃತಜ್ಞಾ ಪೂರ್ವಕವಾಗಿಯಾದರೂ ನಾಮಫಲಕ್ಕೆ ಬಣ್ಣವನ್ನು ನೀಡಿ ಶುಕ್ರೂಷಾಲಯನ್ನು ಮೊದಲಿನಂತೆ ನಡೆಸಬೇಕೆಂದು ಸ್ಥಳೀಯ ಆಡಳಿತವನ್ನು ಒತ್ತಾಯಿಸುತ್ತೇವೆ" ಎಂದಿದ್ದಾರೆ.
ಇನ್ನು ಈ ಬಾರಿ ಹಾಜಿ ಅಬ್ದುಲ್ಲಾರವರ ಸ್ಮರಣಾರ್ಥಆಗಸ್ಟ್ 12 ರಂದು ಟ್ರಸ್ಟ್ ಕೆಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಉಡುಪಿ ಆಯ್ದ ಭಾಗಗಳಲ್ಲಿ ಗಿಡಗಳನ್ನು ನೆಡುವುದು, ಬ್ರಹ್ಮಗಿರಿಯಲ್ಲಿರುವ ಹಿರಿಯ ನಾಗರಿಕರ ಆಶ್ರಯ ತಾಣದಲ್ಲಿರುವ ಹಿರಿಯ ನಾಗರೀಕಿಗೆ ಊಟ ನೀಡುವ ಕಾರ್ಯಕ್ರಮ ವನ್ನು ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದೆ.
ಟ್ರಸ್ಟ್ ನ ಖಜಾಂಚಿಯಾಗಿರುವ ಇಕ್ಬಾಲ್ ಮನ್ನಾ, ಮತ್ತು ಟ್ರಸ್ಟ್ ನ ಪಬ್ಲಿಕ್ ರಿಲೇಶನ್ ಸದಸ್ಯರಾದ ಹುಸೈನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.