ಉಡುಪಿ, ಆ 08 (DaijiworldNews/PY): "ಉಡುಪಿ ನಗರಸಭೆಗೆ ಸಂಬಂಧಪಟ್ಟಂತೆ ನಗರದ 7 ಕಿ.ಮೀ ವ್ಯಾಪ್ತಿಯಲ್ಲಿ ಹಲವಾರು ರಿಕ್ಷಾ ನಿಲ್ದಾಣಗಳಿದ್ದು ಇದಕ್ಕೆ ಯಾವುದೇ ನೀತಿ ನಿಯಮಾವಳಿಗಳಿಲ್ಲದೆ ಮತ್ತು ಇಲಾಖೆಯ ನಿದೇರ್ಶನವಿಲ್ಲದೆ ಮನಬಂದಂತೆ ನಿಲ್ದಾಣದ ಚಾಲಕರು ಅವರದ್ದೇ ಆದ ಕಾನೂನು ರಚಿಸಿಕೊಂಡು ದುಡಿಯುತ್ತಿದ್ದಾರೆ. ಅದಲ್ಲದೇ ರಿಕ್ಷಾ ಚಾಲಕರು ನಿಲ್ದಾಣಕ್ಕೆ ದುಡಿಯಲು ಹೋದಾಗ ಹಲ್ಲೆ ನಡೆಸುವುದು ಮಾತ್ರವಲ್ಲದೆ ನಿಲ್ದಾಣದಿಂದ ರಿಕ್ಷಾವನ್ನು ಹೊರಗೆ ದಬ್ಬುವುದು, ಇತರ ತೊಂದರೆ ಕೊಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ಎಷ್ಟೋ ಬಾರಿ ನಮ್ಮ ಸಂಘಟನೆಯಿಂದ ಇಲಾಖೆಯ ಗಮನಕ್ಕೆ ತಂದಿದ್ದರೂ ನೋಡಿಯೂ ತಮಗೆ ಅರಿವಿಲ್ಲದಂತೆ ಸುಮ್ಮನೆ ಕುಳಿತಿದೆ. ಇದರ ಹಿಂದೆ ಪ್ರಬಲವಾದ ರಾಜಕೀಯ ಕೂಡಾ ನಡೆಯುತ್ತಿದೆ" ಎಂದು ಉಡುಪಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆಯ ಕಾರ್ಯದರ್ಶಿ ವಿಠ್ಠಲ್ ಜತ್ತನ್ ಆರೋಪಿಸಿದರು.
ಅವರು ಶನಿವಾರದಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, "ಕೆಲವು ರಿಕ್ಷಾ ನಿಲ್ದಾಣಗಳು ಒಂದು ಪಕ್ಷ, ಕೆಲವು ರಿಕ್ಷಾ ನಿಲ್ದಾಣಗಳು ಇನ್ನೊಂದು ಪಕ್ಷ ಎಂದು ಪೈಪೋಟಿಯಿಂದ ಬಡ ರಿಕ್ಷಾ ಚಾಲಕರು ದುಡಿಯಲು ಸರಿಯಾದ ನಿಲ್ದಾಣವೇ ಇಲ್ಲದಂತಾಗಿದೆ. ನಗರ ಸಭೆಯು ಸರಕಾರದ ಅನುದಾನದಿಂದ ನಿರ್ಮಿಸಿಕೊಟ್ಟ ನಿಲ್ದಾಣಗಳು ಆಗಿದ್ದು, ನಿಲ್ದಾಣದ ಚಾಲಕರು ತಮ್ಮ ಸ್ವಂತ ಆಸ್ತಿಯಂತೆ ತಮ್ಮ ನಿಲ್ದಾಣದ ಚಾಲರನ್ನು ಹೊರತುಪಡಿಸಿ ಇತರ ಚಾಲಕರನ್ನು ದುಡಿಯಲು ಬಿಡುವುದಿಲ್ಲ" ಎಂದಿದ್ದಾರೆ.
"ಅಲ್ಲದೆ ಕೆಲವು ನಿಲ್ದಾಣದಲ್ಲಿ ಹೊಸ ಸದಸ್ಯರಿಗೆ ನೇಮಕಾತಿಗಾಗಿ ಹತ್ತು ಸಾವಿರದಿಂದ ಮೂವತ್ತು ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ. ಇದನ್ನು ಮನಗಂಡು ನಮ್ಮ ಸಂಘಟನೆಯು ಮಾನ್ಯ ಹೈಕೋರ್ಟ್ಗೆ ಆಟೋಚಾಲಕರ ತೊಂದರೆಗಳ ಬಗ್ಗೆ ಮನವಿ (ಅರ್ಜಿ) ಹಾಕಿದಾಗ, ಮಾನ್ಯ ಹೈಕೋರ್ಟ್ F.R.No W.P.432/2020ರ 11-03-2020ರಲ್ಲಿ ಉಡುಪಿ ನಗರಸಭೆಗೆ ಸಂಬಂಧಪಟ್ಟ 7 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಪ್ರತೀ ನಿಲ್ದಾಣದಲ್ಲಿ ವಲಯ 1ರ ಆಟೋಗಳು ದುಡಿಯಬಹುದು ಎಂದು ಆದೇಶ ನೀಡಿದೆ. ಆದರೂ ಆದೇಶವನ್ನು ಪ್ರಾದೇಶಿಕ ಸಾರಿಗೆ ಇಲಾಖಾಧಿಕಾರಿಗಳು ಉಲ್ಲಂಘಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
"ಸಾರಿಗೆ ಇಲಾಖೆಯ ಸುತ್ತೋಲೆ ಸಿ.ಡಿ.ಎಸ್.ಆರ್.ಡಿ.ಪಿ.ಸಿ.ಆರ್. 137/2011-2012, 53301 ಜಿಲ್ಲಾಧಿಕಾರಿಯವರ ಆದೇಶದಲ್ಲಿ ವಲಯ-1 ರ ಆಟೋಗಳು ನಗರ ಸಭೆಗೆ ಸಂಬಂಧಪಟ್ಟ 7 ಕಿ.ಮೀ ವ್ಯಾಪ್ತಿಯಲ್ಲಿ ದುಡಿಯಲು ಆದೇಶವಿದೆ. ಇಷ್ಟೆಲ್ಲಾ ಕಾನೂನುಗಳಿದ್ದರೂ ಸಂಬಂಧಪಟ್ಟ ಇಲಾಖೆ ಗಮನವೇ ಹರಿಸದಿರುವುದು ತುಂಬಾ ಬೇಸರದ ಸಂಗತಿಯಾಗಿದೆ" ಎಂದು ತಿಳಿಸಿದ್ದಾರೆ.
ರಿಕ್ಷಾ ಚಾಲಕರ ಸಂಘಟನೆಯ ಅಧ್ಯಕ್ಷ ರಾದ ರಾಜೇಶ್ ಬಿ ಶೆಟ್ಟಿ ಮಾತನಾಡಿ, "ಈಗಾಗಲೇ ನಗರದಲ್ಲಿ 40ಕ್ಕೂ ರಿಕ್ಷಾ ನಿಲ್ದಾಣವಿದ್ದು, ಐದು ಬೇರೆ ಬೇರೆ ರಿಕ್ಷಾ ಚಾಲಕರ ಸಂಘಟನೆಗಳಿವೆ. 6700 ರಿಕ್ಷಾಗಳಿಗೆ ಪರವಾನಿಗೆ ಕೊಡಲು ಬಾಕಿ ಇದೆ. ಮಂಗಳೂರು ವಲಯದಲ್ಲಿ ಏಳು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಆಟೋ ನಿಲ್ದಾಣ ದಲ್ಲಿ ಕೆಲಸ ಮಾಡಲು ಅವಕಾಶವಿದೆ. ಆದರೆ ಉಡುಪಿಯಲ್ಲಿ ಕೋರ್ಟ್ ಆದೇಶವೇ ಉಲ್ಲಂಘನೆ ಆಗುತ್ತಿದ್ದು ಆರ್ಟಿಎ ಕೂಡ ಮೌನವಾಗಿ ಕುಳಿತಿದೆ. ಮುಂದೆ ಈ ಬಗ್ಗೆ ಸಾರಿಗೆ ಇಲಾಖೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.
ಸಂಘಟನೆಯ ಉಪಾಧ್ಯಕ್ಷ ಚೆನ್ನಕೇಶವ ಭಟ್, ಕೋಶಾಧಿಕಾರಿ ಸ್ಟೇನ್ಲಿ ಬಂಗೇರ, ಜೊತೆ ಕಾರ್ಯದರ್ಶಿ ರಾಜೇಶ್ ಸುವರ್ಣ ಮತ್ತು ಗಿರೀಶ್ ಉಪಸ್ಥಿತರಿದ್ದರು.