ಉಡುಪಿ, ಆ 07 (DaijiworldNews/PY): "ಕೊರೊನಾ ನಿಯಂತ್ರಣ ಮಾಡುವಲ್ಲಿ ತನ್ನನ್ನು ಸೇರಿಕೊಂಡು ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಅಗತ್ಯ. ನಿನ್ನೆ ಶುಕ್ರವಾರ ಒಂದು ದಿನ ಆಯೋಜನೆ ಮಾಡಿದ ಅಭಿನಂದನಾ ಸಮಾರಂಭ ಬಿಟ್ಟು ಇನ್ನು ಮುಂದೆ ಯಾವುದೇ ನನಗೋಸ್ಕರ ಅಭಿನಂದನಾ ಸಮಾರಂಭ ಆಯೋಜನೆ ಮಾಡಬಾರದು ಎಂದು ಈಗಗಾಲೇ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದು ತಾನು ಕೂಡ ಭಾಗವಹಿಸುವುದಿಲ್ಲ. ಇದನ್ನು ಉಳಿದವರು ಅನುಸರಿಸಬೇಕು" ಸಚಿವ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು.
ಅವರು ಶನಿವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಮತ್ತು ಪ್ರವಾಹ ಜಿಲ್ಲಾ ಉಸ್ತುವಾರಿ, ಸಚಿವಸುನಿಲ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿದರು.
"ಕೊರೊನಾ ಪಾಸಿಟಿವ್ ಬಂದವರು ಕೊರೊನಾ ಕೇರ್ ಸೆಂಟರ್ನಲ್ಲಿರುವುದು ಕಡ್ಡಾಯ. ಜಿಲ್ಲೆಯಲ್ಲಿ ಕೊರೊನಾ ಕೇರ್ ಸೆಂಟರ್ನಲ್ಲಿ 2000 ಹಾಸಿಗೆಗಳ ವ್ಯವಸ್ಥೆಯನ್ನು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಾಡಲಾಗುತ್ತಿದೆ. ಮಿಯಾರು, ನಿಟ್ಟೆ, ಹೆಬ್ರಿಯಲ್ಲಿ ಈಗಾಗಲೇ ಆರಂಭವಾಗಿದೆ. ಪಾಸಿಟಿವ್ ಬಂದವರನ್ನು ಮನವೊಲಿಸುವ ಕೆಲಸಕ್ಕೆ ಇವತ್ತಿನಿಂದ ಕಾರ್ಯೋನ್ಮುಖವಾಗಬೇಕು. ಈಗಾಗಲೇ ಸರ್ಕಾರ ಮತ್ತು ಸಿಎಸ್ ಆರ್ ಘಟಕದ ಮುಖಾಂತರ ಜಿಲ್ಲೆಯಲ್ಲಿ ಕಾರ್ಕಳ ಮತ್ತು ಹೆಬ್ರಿಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಕೆಲಸ ಮಾಡುತ್ತಿದೆ . ಉಡುಪಿ, ಜಿಲ್ಲಾಸ್ಪತ್ರೆ ಅಜ್ಜರಕಾಡು ಮತ್ತು ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಿಸಲು ಅಗತ್ಯ ಸಾಮಗ್ರಿ, ಯಂತ್ರಗಳು ಬಂದಿದ್ದು, ಒಂದು ವಾರದೊಳಗೆ ಕಾಮಗಾರಿ ಮುಗಿಯುತ್ತದೆ" ಎಂದು ಭರವಸೆ ನೀಡಿದರು.
"ಆಗಸ್ಟ್ 30ರೊಳಗೆ ಐಸಿಯು ಬೆಡ್ಸ್ ಹೆಚ್ಚು ಮಾಡುವಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಕಾರ್ಕಳದಲ್ಲಿ 15, ಕುಂದಾಪುರದಲ್ಲಿ 15 ಮತ್ತು ಜಿಲ್ಲಾಸ್ಪತ್ರೆಯಲ್ಲಿ 20 ಐಸಿಯು ಬೆಡ್ಗಳು ಕಾರ್ಯಾರಂಭ ಮಾಡುತ್ತವೆ. 100 ಮೀಟರ್ ವ್ಯಾಪ್ತಿಯಲ್ಲಿ ಐದು ಸಕ್ರಿಯ ಕೊರೊನಾ ಪ್ರಕರಣಗಳಿದ್ದರೆ ಮನೆಯನ್ನು ಕಡ್ಡಾಯವಾಗಿ ಸೀಲ್ ಡೌನ್ ಮಾಡಿ ಆ ಪ್ರದೇಶವನ್ನು ಕಂಟೈನ್ ಮೆಂಟ್ ವಲಯವಾಗಿ ಘೋಷಣೆ ಮಾಡಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಎರಡನೇ ಹಂತದ ಲಸಿಕೆಗಾಗಿ 34000 ಲಸಿಕೆಗಳ ಕೊರತೆ ಇದ್ದು ಹೆಚ್ಚಿನ ಪೂರೈಕೆಗಾಗಿ ಸಂಬಂಧ ಪಟ್ಟವರ ಜೊತೆ ಚರ್ಚೆ ಮಾಡಲಾಗುತ್ತೆ" ಎಂದರು.
"ಹೊರ ರಾಜ್ಯದಿಂದ ಬಂದಿರುವವರಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ಇದುವರೆಗೆ ಯಾವುದೇ ಪ್ರಕರಣಗಳು ಬರದಿರುವ ಪಂಚಾಯತ್ ನಲ್ಲಿ ಈಗ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಈಗಾಗಲೇ ನಿರ್ಬಂಧಗಳಿದ್ದು ಅದನ್ನು ಅಚ್ಚು ಕಟ್ಟಾಗಿ ನಿಭಾಯಿಸಬೇಕು. ಜಿಲ್ಲೆಯಲ್ಲಿ ಮೊದಲ ಡೋಸ್ ಶೇ.64 ಪೂರ್ಣ ಆಗಿದ್ದು , ಎರಡನೇ ಲಸಿಕೆಯ ಪೂರೈಕೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದರೆ ಮೊದಲ ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದೆ" ಎಂದು ತಿಳಿಸಿದರು.
"ಪ್ರಾಕೃತಿಕ ವಿಪತ್ತು ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದ್ದು ಮಳೆಯಿಂದ ಹಾನಿಯಾದ್ದಕ್ಕ್ಕೆ 48 ಗಂಟೆಯೊಳಗೆ ವಿಪತ್ತು ಪರಿಹಾರದ ಹಣವನ್ನು ಸಂತ್ರಸ್ತರಿಗೆ ಕೊಡಬೇಕು. ಈಗಾಗಲೇ ಪ್ರತಿ ತಾಲೂಕು ತಹಶೀಲ್ದಾರ್ ಖಾತೆಗೆ ಹಣ ಬಿಡುಗಡೆ ಆಗಿದೆ. ವಿಪತ್ತು ಪರಿಹಾರಕ್ಕಾಗಿ ರೂ11 ಕೋಟಿ ಜಿಲ್ಲಾಡಳಿತದಲ್ಲಿದೆ . ಎಲ್ಲವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು" ಎಂದು ಹೇಳಿದರು.
"ಉತ್ತರ ಕನ್ನಡದಂತೆ ಉಡುಪಿಯಲ್ಲಿ ಹಾನಿಯಾಗಿಲ್ಲ. ಇನ್ನು ತೌಕ್ತೆ ಚಂಡಮಾರುತದಿಂದ ಹಾನಿಯಾದ ಬಗ್ಗೆ ಜಿಲ್ಲಾಡಳಿತ ಮತ್ತು ಬೇರೆ ಬೇರ ಇಲಾಖೆಗಳು ಸೇರಿ 100 ಕೋಟಿ ರೂ. ಯೋಜನೆಯನ್ನು ಹಾನಿಗೊಳಗಾದ ವ್ಯವಸ್ಥೆಗೆ ಸಂಬಂಧ ಪಟ್ಟಂತೆ100 ಕೋಟಿ ರೂ. ಬೇಡಿಕೆಯನ್ನು ಇಟ್ಟು ಸಂಪೂರ್ಣ ವಿವರವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ" ಎಂದರು.
ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬೈಂದೂರ್ ಶಾಸಕ ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವೈ. ನವೀನ್ ಭಟ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಮತ್ತಿತರ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.