ಬಂಟ್ವಾಳ, ಆ 07 (DaijiworldNews/MS): ಅಣ್ಣನೋರ್ವ ತಮ್ಮನನ್ನು ಅಡಿಕೆ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆಯಲ್ಲಿ ಆ.07 ಶುಕ್ರವಾರ ತಡರಾತ್ರಿ ನಡೆದಿದೆ.
ಶಾಂತಿಗುಡ್ಡೆ ನಿವಾಸಿ 20ರ ಹರೆಯದ ಯುವಕ ಸುಂದರ ಕೊಲೆಯಾದ ವ್ಯಕ್ತಿ. ಈತನ ಅಣ್ಣ ರವಿ ಹತ್ಯೆಯ ಆರೋಪಿಯಾಗಿದ್ದಾನೆ.
ಸುಂದರ ಅವಿವಾಹಿತವಾಗಿದ್ದು, ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ. ಆತನ ಮನೆಯ ಹತ್ತಿರದಲ್ಲೇ ಅಣ್ಣ ರವಿಯ ಮನೆಯಿದ್ದು, ಅಲ್ಲಿಂದ ಅತ್ತಿಗೆ ಊಟ- ತಿಂಡಿ ನೀಡುತ್ತಿದ್ದರು. ಶುಕ್ರವಾರ ಮನೆಯಲ್ಲಿ ತಾಯಿಯ ವರ್ಷಾಂತಿಕ ಇದ್ದು ರಾತ್ರಿ ಊಟದ ಬಳಿಕ ಅಣ್ಣ - ತಮ್ಮ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.
ಸುಂದರನಿಗೂ ಆತನ ಅತ್ತಿಗೆಗೂ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಆತನ ಅಣ್ಣ ರವಿಗೂ ಪದೇ ಪದೇ ಜಗಳ ನಡೆಯುತ್ತಲೇ ಇತ್ತು. ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ನಡೆದಿದ್ದು, ಸುಂದರ ಬೊಬ್ಬೆ ಹೊಡೆಯುವುದನ್ನು ಕೇಳಿ ಮತ್ತೋರ್ವ ಅಣ್ಣ ರಮೇಶ ಅವರು ಹೋಗಿ ನೋಡಿದಾಗ, ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ತಲೆಗೆ ಹೊಡೆದಿದ್ದು, ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಆರೈಕೆ ಮಾಡುತ್ತಿದ್ದಂತೆ ಮೃತಪಟ್ಟಿದ್ದಾನೆ.
ಘಟನೆಯ ಬಳಿಕ ಆರೋಪಿ ರವಿಯು ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.