ಉಡುಪಿ,ಆ. 06 (DaijiworldNews/SM): ಶಿಶು ಮತ್ತು ತಾಯಿ ಮರಣ ಸಂಖ್ಯೆಯನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಗರ್ಭಿಣಿ ಸ್ತ್ರೀಯರಿಗೆ ತಾಯಿ ಕಾರ್ಡ್ ನೀಡುವುದರೊಂದಿಗೆ, ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ, ಶಿಶು ಮತ್ತು ತಾಯಿ ಮರಣ ನಿಯಂತ್ರಣ ಹಾಗೂ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಶಿಶು ಹಾಗೂ ತಾಯಿ ಮರಣ ಪ್ರಮಾಣ ತಡೆಗಟ್ಟಲು ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ ಸಹ ಲಾಕ್ಡೌನ್ ಅವಧಿಯಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ, ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಇತರೆ ಸಾಮಾನ್ಯ ಕಾಯಿಲೆ ಹಾಗೂ ಗರ್ಭಿಣಿ ಸ್ತ್ರೀಯರ ಪರೀಕ್ಷೆಗೆ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಮಾರ್ಚ್ನಿಂದ ಜೂನ್ವರೆಗೆ 8 ತಾಯಿ ಮರಣ ಹಾಗೂ ಫೆಬ್ರವರಿಯಿಂದ ಜೂನ್ವರೆಗೆ 52 ಶಿಶು ಮರಣ ಪ್ರಕರಣಗಳು ಆಗಿವೆ ಎಂದವರು ಅರಿವಿನ ಕೊರತೆ, ಸಮಯಕ್ಕೆ ಸರಿಯಾಗಿ ಸಿಗದ ಅರೋಗ್ಯ ವೈದ್ಯಕೀಯ ಸೇವೆ, ಕಡಿಮೆ ತೂಕ, ಅಪೌಷ್ಠಿಕತೆ, ಹೃದಯ ಸಂಬಂದಿ ಸಮಸ್ಯೆ, ಅವಧಿಗೆ ಮುಂಚೆ ಹೆರಿಗೆ ಸೇರಿದಂತೆ ಮತ್ತಿತರ ಕಾರಣದಿಂದ ತಾಯಿ ಮತ್ತು ಶಿಶು ಮರಣಗಳು ಹೆಚ್ಚಾಗುವ ಸಾಧ್ಯತೆ ಇವೆ ಹೀಗಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.
ತಾಯಿ ಮಗು ಮರಣವು ಆಕಸ್ಮಿಕವಲ್ಲದೇ, ವೈದ್ಯರುಗಳ ನಿರ್ಲಕ್ಷ್ಯದಿಂದ ಉಂಟಾಗಿದ್ದರೆ ಅಂತಹವುಗಳಲ್ಲಿ ಪ್ರಾರಂಭದಿಂದ ಕೊನೆಯ ತನಕ ನೀಡಿರುವ ಚಿಕಿತ್ಸೆಯ ಬಗ್ಗೆ ತನಿಖೆ ಕೈಗೊಂಡು ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ನೀಡುವ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮಾಡಬೇಕು, ಜೊತೆಗೆ ಅವರಿಗೆ ಉತ್ತಮ ಆರೋಗ್ಯವನ್ನು ಕಾಪಾಡಲು ಸಲಹೆ ನೀಡಬೇಕು ಎಂದರು.